ಮೆಟ್ರೊ ನೇರಳೆ ಮಾರ್ಗ: ಕೇಂದ್ರ, ರಾಜ್ಯ ಸರ್ಕಾರಗಳ ಜಟಾಪಟಿ
ಮೆಟ್ರೊ ನೇರಳೆ ಮಾರ್ಗದಲ್ಲಿ ವಿಸ್ತರಿತ ಕಾಮಗಾರಿ ಪೂರ್ಣಗೊಂಡಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿಯಲ್ಲಿ ಉದ್ಘಾಟನೆಗೆ ದಿನ ನಿಗದಿಯಾಗುತ್ತಿಲ್ಲ. ಯಾವ ಉದ್ಘಾಟನೆಗೂ ಕಾಯದೇ ಅ.9ರಂದೇ ರೈಲು ಆರಂಭಿಸಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು.
ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿದ್ದ ಬೈಯಪ್ಪನಹಳ್ಳಿ–ಕೆ.ಆರ್. ಪುರ ನಡುವೆ 2.10 ಕಿಲೋಮೀಟರ್ ಹಾಗೂ ಕೆಂಗೇರಿ–ಚಲ್ಲಘಟ್ಟದ ನಡುವೆ 2.05 ಕಿ.ಮೀ ಕಾಮಗಾರಿಗಳು ಜುಲೈಯಲ್ಲಿ ಪೂರ್ಣಗೊಂಡಿದ್ದವು. ಬಳಿಕ ಒಂದು ತಿಂಗಳುಗಳ ಕಾಲ ವಿವಿಧ ಪರೀಕ್ಷೆಗಳು ನಡೆದಿದ್ದವು. ಸೆಪ್ಟೆಂಬರ್ನಲ್ಲಿ ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಪರಿಶೀಲನೆ ನಡೆಸಿ, ವರದಿ ನೀಡಿದ್ದರು. ಆದರೆ, ಉದ್ಘಾಟನೆಗೆ ದಿನ ನಿಗದಿಯಾಗಿರಲಿಲ್ಲ. ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದರು.
2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ತಮ್ಮ ಪಕ್ಷದ ರಾಷ್ಟ್ರೀಯ ನಾಯಕರನ್ನು ಕರೆಸಿ ಅದ್ದೂರಿಯಾಗಿ ಉದ್ಘಾಟಿಸಲು ತಯಾರಿ ನಡೆಸಿದ್ದರು. ಇನ್ನೊಂದು ಕಡೆಯಿಂದ ಪ್ರಧಾನಿಯವರಿಂದಲೇ ಉದ್ಘಾಟಿಸಬೇಕು ಎಂದು ಬಿಜೆಪಿ ಮುಂದಾಗಿತ್ತು. ಈ ಜಟಾಪಟಿಯಲ್ಲಿ ಚಾಲನೆಗೆ ದಿನ ನಿಗದಿಯಾಗಿರಲಿಲ್ಲ.