‘ಉತ್ತರ ಕರ್ನಾಟಕದ ಭಾಗಗಳಲ್ಲಿ ಪರಿಚಿತವಾಗಿದ್ದ ಸಂತ ಶಿಶುನಾಳ ಶರೀಫ್ ಸಾಹೇಬರ ಅನುಭಾವಗೀತೆಗಳನ್ನು ಸಂಗ್ರಹಿಸಿದ ಭಟ್ಟರು, ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ಇಡೀ ನಾಡಿಗೆ ತಲುಪಿಸಿದರು. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ ಮುಂತಾದ ಖ್ಯಾತ ಗಾಯಕರಿಂದ ಅವುಗಳನ್ನು ಹಾಡಿಸಿ, ಕನ್ನಡಿಗರೆಲ್ಲರ ನಾಲಿಗೆಯ ಮೇಲೂ ಅವು ನಲಿಯುವಂತೆ ಮಾಡಿದರು. ಇದರಿಂದಾಗಿ ಅವರಿಗೆ ‘ಶರೀಫ್ ಭಟ್ಟ’ ಎಂಬ ಬಿರುದು ಕೂಡ ಸಂದಿತ್ತು. ಇಂದು ರೇಡಿಯೊ, ಟಿವಿ, ಧ್ವನಿಸಾಂದ್ರಿಕೆಗಳು ಮತ್ತು ಅಂತರ್ಜಾಲದಲ್ಲಿ ಅತ್ಯಂತ ಪ್ರಚಲಿತವಾಗಿರುವುದು ಹೆಚ್ಚಾಗಿ ಅವರ ಭಾವಗೀತೆಗಳೇ ಆಗಿವೆ’ ಎಂದರು.