ಬೆಂಗಳೂರು: ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿ ಅವರ ಚಿನ್ನದ ಸರವನ್ನು ಕಿತ್ತಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ವಿಘ್ನೇಶ್ವರನಗರದ ಜೀವನ್ (26) ಮತ್ತು ಉಲ್ಲಾಳ ಮುಖ್ಯರಸ್ತೆಯ ನಿವಾಸಿ ನಿತಿನ್ (24) ಬಂಧಿತರು. ಇವರಿಬ್ಬರಿಂದ 1 ಬೈಕ್ ಮತ್ತು 2 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಶ್ರೀನಿವಾಸನಗರದ ವಕೀಲ ಹೇಮಂತ್ ಭಾರದ್ವಾಜ್ ಅವರು ಆರಾಧನಾ ಗಾರ್ಮೆಂಟ್ಸ್ ಕಾರ್ಖಾನೆ ಬಳಿಯ ರಸ್ತೆಯಲ್ಲಿ ಮೇ 3ರಂದು ರಾತ್ರಿ 11.30 ಗಂಟೆ ಸುಮಾರಿಗೆ ಹೊರಟಿದ್ದರು. ಅದೇ ಮಾರ್ಗದಲ್ಲಿ ಆರೋಪಿಗಳು ಬೈಕ್ನಲ್ಲಿ ಬಂದಿದ್ದರು. ಹೇಮಂತ್ ಅವರ ಬೈಕ್ಗೆ ತಮ್ಮ ಬೈಕ್ ಡಿಕ್ಕಿ ಹೊಡೆಸಿದ್ದರು’ ಎಂದು ತಿಳಿಸಿದರು.
‘ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ್ದ ಹೇಮಂತ್ ಅವರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ನಂತರ, 40 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದರು.