ಬೆಂಗಳೂರು: ‘ಮಳೆ ಅನಾಹುತಗಳನ್ನು ತಡೆಯುವ ಹೊಣೆಯು ಪಾಲಿಕೆಯ ವಲಯ ಮಟ್ಟದ ಎಂಜಿನಿಯರ್ಗಳ ಮೇಲಿದೆ. ಹಾಗಾಗಿ ಕೋವಿಡ್ ಕರ್ತವ್ಯಗಳಿಗೆ ಅವರನ್ನು ಬಳಸುವುದನ್ನು ಕಡಿಮೆ ಮಾಡಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ನಗರದಲ್ಲಿ ಇನ್ನು ಕೆಲವು ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಅನಾಹುತ ತಡೆಯಲು ನಡೆದಿರುವ ಸಿದ್ಧತೆಗಳ ಕುರಿತು ಸುದ್ದಿಗಾರರ ಜೊತೆ ಮಾತನಾಡಿದರು.
‘ಈ ವರ್ಷದಿಂದ ರಾಜಕಾಲುವೆಗಳನ್ನು ವರ್ಷಪೂರ್ತಿ ನಿರ್ವಹಣೆ ಮಾಡಲಾಗುತ್ತಿದೆ. ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದದಾಸರಹಳ್ಳಿ ವಲಯದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿದ್ದು ಬಿಟ್ಟರೆ ರಾಜಕಾಲುವೆ ಉಕ್ಕಿ ಹರಿದು ಪ್ರವಾಹ ಉಂಟಾಗಿದ್ದು ಕಡಿಮೆ’ ಎಂದರು.
‘ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕತ್ತರಿಸುವ ಹಾಗೂ ಮಳೆಗಾಲದಲ್ಲಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ತಂಡಗಳನ್ನು ಕೋವಿಡ್ ಕಾರ್ಯಕ್ಕೆ ಬಳಸಿಲ್ಲ. ಈ ತಂಡಗಳು ಮಳೆಗಾಲದಲ್ಲಿ ತುರ್ತು ನಿರ್ವಹಣೆ ಕಾರ್ಯಗಳಿಗೆ ಸನ್ನದ್ಧವಾಗಿವೆ’ ಎಂದು ತಿಳಿಸಿದರು.