ಬೆಂಗಳೂರು:‘ಮನೆ ಅಥವಾ ನಿವೇಶನಗಳನ್ನು ಖರೀದಿಸುವ ಗ್ರಾಹಕರ ನೆರವಿಗೆ ಇರುವ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ರೇರಾ) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದುಕರ್ನಾಟಕ ಮನೆ ಗ್ರಾಹಕರ ವೇದಿಕೆ ಸಂಚಾಲಕ ಧನಂಜಯ ಪದ್ಮನಾಭಾಚಾರ್ ದೂರಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸಾವಿರಾರು ಜನ ಕೆಲ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಸಿಲುಕಿ, ಹಣ ಕಳೆದುಕೊಂಡಿದ್ದಾರೆ. ಖರೀದಿಸಿದ ಜಾಗಗಳಿಗೆ ಸೂಕ್ತ ದಾಖಲೆಗಳನ್ನು ಕೊಡದೆ, ರಿಯಲ್ ಎಸ್ಟೇಟ್ನವರು ವಂಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮೋಸ ಹೋದವರು ಮಾಲೀಕರ ವಿರುದ್ಧ ಠಾಣೆಗಳಲ್ಲಿ ದೂರು ಕೊಟ್ಟರೆ, ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಎಫ್ಐಆರ್ ಆದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಗ್ರಾಹಕರಿಗೆ ನ್ಯಾಯ ಸಿಗುತ್ತಿಲ್ಲ. ಈ ಮೋಸಗಳಿಗೆ ಕಡಿವಾಣ ಹಾಕಲು ಜಾರಿ ಮಾಡಿರುವ ‘ರೇರಾ ಕಾಯ್ದೆ’ಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಆಗ್ರಹಿಸಿದರು.