ಬೆಂಗಳೂರು: ‘ಬಾಡಿಗೆ ಬೈಕ್ ಸೇವೆ ಒದಗಿಸುತ್ತಿರುವ ‘ಬೌನ್ಸ್’ ಕಂಪನಿಯ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನನ್ನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದಾರೆ’ ಎಂದು ಆರೋಪಿಸಿ ಪ್ರಶಾಂತ್ ಎಂಬುವರು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
’ಕೋಡಿಗೇಹಳ್ಳಿ ಗೇಟ್ ನಿಂದವೆಂಕಟಗೌಡ ಬಡಾವಣೆಯ 3ನೇ ಅಡ್ಡರಸ್ತೆಯಲ್ಲಿ ಭಾನುವಾರ ನಸುಕಿನಲ್ಲಿ ನಡೆದುಕೊಂಡು ಹೋಗುವಾಗಲೇ ಪ್ರಶಾಂತ್ ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ’ ಎಂದು ಅಮೃತಹಳ್ಳಿ ಪೊಲೀಸರು ಹೇಳಿದರು.
‘ಆರೋಪಿಗಳ ಪತ್ತೆಗಾಗಿ ಘಟನಾ ಸ್ಥಳ ಹಾಗೂ ಅಕ್ಕ–ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಚಾಕು ತೋರಿಸಿ ಜೀವ ಬೆದರಿಕೆ: ‘ನನ್ನೂರು ಶಿವಮೊಗ್ಗ ಜಿಲ್ಲೆಯ ಸಾಗರ. ಇತ್ತೀಚೆಗೆ ಊರಿಗೆ ಹೋಗಿದ್ದೆ. ವಾಪಸ್ ರೈಲಿನಲ್ಲಿ ಭಾನುವಾರ ನಸುಕಿನಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದೆ. ನಂತರ, ಬಿಎಂಟಿಸಿ ಬಸ್ಸಿನಲ್ಲಿ ಕೊಡಿಗೇಹಳ್ಳಿ ಗೇಟ್ ಬಳಿ ಹೋಗಿ ಇಳಿದು ಮನೆಯತ್ತ ನಡೆದುಕೊಂಡು ಹೊರಟಿದ್ದೆ’ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.
‘ನನ್ನನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಚಾಕು ತೋರಿಸಿ ಜೀವಬೆದರಿಕೆ ಹಾಕಿದ್ದರು. ಮೊಬೈಲ್, ಪರ್ಸ್ ಹಾಗೂ ಬ್ಯಾಗ್ ಕಸಿದುಕೊಂಡು ಹೋದರು. ಬ್ಯಾಗ್ನಲ್ಲಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ, ಎಟಿಎಂ ಕಾರ್ಡ್, ಗುರುತಿನ ಚೀಟಿ ಹಾಗೂ ₹ 1,500 ನಗದು ಇತ್ತು’ ಎಂದು ಅವರು ಹೇಳಿದ್ದಾರೆ.
‘ಕನ್ನಡ ಹಾಗೂ ತಮಿಳಿನಲ್ಲಿ ಮಾತನಾಡುತ್ತಿದ್ದ ಆರೋಪಿಗಳು, ‘ಬೌನ್ಸ್’ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದರು’ ಎಂದು ಪ್ರಶಾಂತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.