ಬೆಂಗಳೂರು: ಕೆ.ಜಿ.ಹಳ್ಳಿಯ ಇದಾಯತ್ ನಗರದಲ್ಲಿ ರೌಡಿ ಸ್ಟೀಫನ್ (28) ಎಂಬಾತನನ್ನು ಕತ್ತು ಕೊಯ್ದು ಬುಧವಾರ ರಾತ್ರಿ ಕೊಲೆ ಮಾಡಲಾಗಿದೆ.
‘ಲಿಂಗರಾಜಪುರ ನಿವಾಸಿ ಆಗಿದ್ದ ಸ್ಟೀಫನ್, ಕೆ.ಜಿ.ಹಳ್ಳಿ ಠಾಣೆಯ ರೌಡಿ ಶೀಟರ್. ಸಹೋದರನ ಆಟೊ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ರಾತ್ರಿ ಮನೆಗೆ ಹೊರಟಿದ್ದ ಸ್ಟೀಫನ್ನನ್ನು ದುಷ್ಕರ್ಮಿಗಳು, ಕತ್ತು ಕೊಯ್ದು ಕಿವಿಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ನಂತರ, ಶವವನ್ನು ಆಟೊದ ಹಿಂಬದಿ ಸೀಟಿನಲ್ಲಿ ಹಾಕಿ ಪರಾರಿಯಾಗಿದ್ದಾರೆ.’
‘ನಸುಕಿನಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಆಟೊದಲ್ಲಿ ರಕ್ತ ಸೋರುತ್ತಿತ್ತು. ಅದನ್ನು ಗಮನಿಸಿದ್ದ ಸ್ಥಳೀಯೊಬ್ಬರು ಆಟೊ ಬಳಿ ಹೋಗಿ ನೋಡಿದಾಗ ಶವ ಕಂಡಿತ್ತು. ಸ್ಥಳಕ್ಕೆ ಹೋಗಿ ಶವವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಹಳೇ ವೈಷಮ್ಯದಿಂದಾಗಿ ಈ ಕೊಲೆ ನಡೆದಿರುವ ಶಂಕೆ ಇದೆ’ ಎಂದು ಪೊಲೀಸರು ಹೇಳಿದರು.