ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿಶ್ವವಿದ್ಯಾಲಯ ಉಳಿಸಲು ಭಿತ್ತಿಪತ್ರ ಚಳವಳಿ

ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ ಹರಿದಾಡಿದ ಗಣ್ಯರ ಹೇಳಿಕೆಗಳು * ಸರ್ಕಾರದ ಮೇಲೆ ಒತ್ತಡ ಹೇರಲು ಹೊಸ ತಂತ್ರ
Last Updated 23 ಡಿಸೆಂಬರ್ 2020, 15:11 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ‘ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸಿ’ ಆಂದೋಲನದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಸಾಮಾಜಿಕ ಜಾಲತಾಣಗಳಲ್ಲಿ ‘ಭಿತ್ತಿಪತ್ರ ಚಳವಳಿ’ ಆರಂಭಿಸಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಶೋಧನಾ ಕ್ಷೇತ್ರಗಳ ವಿವಿಧ ಗಣ್ಯರು ಇದನ್ನು ಬೆಂಬಲಿಸಿದ್ದು, ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಇತ್ತೀಚೆಗೆ ‘#ಕನ್ನಡವಿವಿಉಳಿಸಿ’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವಿಟರ್ ಅಭಿಯಾನ ನಡೆಸಿತ್ತು. ‌ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದ ನಿಯೋಗವು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರನ್ನು ಭೇಟಿಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳನ್ನೂ ಬಗೆಹರಿಸಬೇಕೆಂದು ಒತ್ತಾಯಿಸಿತ್ತು. ಅನುದಾನ ಬಿಡುಗಡೆಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆಯನ್ನೂ ನೀಡಿದ್ದರು. ಇದಾಗಿ ನಾಲ್ಕು ದಿನಗಳಾದರೂ ಅನುದಾನ ಬಿಡುಗಡೆಯಾಗದ ಕಾರಣ ವೇದಿಕೆಯು ‘ಭಿತ್ತಿಪತ್ರ’ ಚಳವಳಿ ಹಮ್ಮಿಕೊಂಡಿದೆ. ವೇದಿಕೆಯ ಕಾರ್ಯಕರ್ತರು ಹಾಗೂ ಕನ್ನಡ ಅಭಿಮಾನಿಗಳು ಗಣ್ಯರ ಹೇಳಿಕೆಗಳನ್ನು ಆಧರಿಸಿದ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಗಣ್ಯರ ಅಭಿಪ್ರಾಯಗಳು...

ಜಾಗತೀಕರಣ ಮತ್ತು ಖಾಸಗೀಕರಣದ ಪ್ರಬಲ ಹೊಡೆತಕ್ಕೆ ಸಿಕ್ಕಿ ಸಾವಿರಾರು ಭಾಷೆಗಳು ಅವಸಾನದ ಅಂಚಿಗೆ ತಲುಪಿವೆ. ಅವುಗಳ ಧ್ವನಿ ಉಡುಗಿದೆ. ಸರ್ಕಾರಗಳು ಈ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಯುನೆಸ್ಕೊ ಈ ಕುರಿತು ಆಗಾಗ ನೀಡಿದ ಎಚ್ಚರವು ಯಾರ ಕಿವಿಗಳನ್ನೂ ತಲುಪುತ್ತಿಲ್ಲ. ಇಂತಹ ದುರ್ಬರ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸೂಕ್ತವಾದ ಅನುದಾನ ಕೊಡದಿರುವುದು ಕರ್ನಾಟಕ ಸರ್ಕಾರದ ಕನ್ನಡ ವಿರೋಧಿ ಧೋರಣೆಗೆ ಸಾಕ್ಷಿ. ಈ ಅನುದಾನ ಕಡಿತದ ಹಿಂದೆ ಇನ್ನೇನೋ ಹುನ್ನಾರ ಇದ್ದಂತಿದೆ. ಕನ್ನಡಿಗರು ಇದನ್ನು ಅರ್ಥ ಮಾಡಿಕೊಂಡು ಕನ್ನಡ ವಿಶ್ವವಿದ್ಯಾಲಯ ಉಳಿಸಲು ಮುಂದಾಗಬೇಕು. ಕನ್ನಡದಂತಹ ಅತ್ಯದ್ಭುತ ಭಾಷೆಯ ಪತನಕ್ಕೆ ನಾವು ಸಾಕ್ಷಿಗಳಾಗಬಾರದು

- ಪುರುಷೋತ್ತಮ ಬಿಳಿಮಲೆ (ಜಾನಪದ ವಿದ್ವಾಂಸ)

***

ವಿಶ್ವಜ್ಞಾನವನ್ನು ಕನ್ನಡದಲ್ಲಿ ತಂದು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಂಬಂಧದ ವಿವೇಕವನ್ನು ವಿಸ್ತರಿಸಬೇಕಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನವನ್ನು ನೀಡದ ಇರುವ ನಡೆಯು ಕನ್ನಡ ಪರಂಪರೆಯ ಪ್ರಜ್ಞೆಗೆ ಮಾಡುವ ಅವಮಾನ. ಅಷ್ಟೇ ಅಲ್ಲ, ಆಳುವ ವರ್ಗವು ತನಗೆ ತಾನೇ ಮಾಡಿಕೊಳ್ಳುವ ಅವಮಾನ. ಅನುದಾನ ಬಿಡುಗಡೆಯು ಆದ್ಯತೆಯ ಕೆಲಸವಾಗಬೇಕು. ಇದು ಅನುಷ್ಠಾನವಾಗಬೇಕು. ಸಂವೇದನಾಶಿಲ ಸ್ವಾಭಿಮಾನವೂ ಅಧ್ಯಯನ ಪರ ಅಭಿಮಾನವೂ ಆಗಬೇಕು.

- ಪ್ರೊ. ಬರಗೂರು ರಾಮಚಂದ್ರಪ್ಪ

***

ಭಾರತ ಸರ್ಕಾರ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ ಬದಲಿಸುತ್ತಿದೆ. ಹಾಗಾಗಿ ಈಗಿರುವ ಕನ್ನಡ ವಿಶ್ವವಿದ್ಯಾಲಯದ ಸ್ವರೂಪವನ್ನು ಬದಲಿಸುವ ಯತ್ನಕ್ಕೆ ಮುಂದಾಗಿರುವಂತೆ ತೋರುತ್ತದೆ. ಇದು ನನ್ನ ಅನಿಸಿಕೆ. ಕನ್ನಡ ವಿಶ್ವವಿದ್ಯಾಲಯದ ಏಕಘಟಕದ (ಯೂನಿಟರಿ) ಸ್ವರೂಪವನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಸಂಲಗ್ನ (ಅಫಿಲಿಯೇಟಿಂಗ್) ವಿಶ್ವವಿದ್ಯಾಲಯವನ್ನಾಗಿ ಬದಲಿಸುವುದು ಸರಿಯಲ್ಲ.

-ಡಾ.ಕೆ.ವಿ.ನಾರಾಯಣ, ಭಾಷಾಶಾಸ್ತ್ರಜ್ಞರು, ಕನ್ನಡ ಸಂಸ್ಕೃತಿ ಚಿಂತಕರು

***

ಕನ್ನಡದ ಜಾನಪದ, ಇತಿಹಾಸ, ಪರಂಪರೆಗಳೊಂದಿಗೆ ಈ ನೆಲಮೂಲದ ಆದಿವಾಸಿ, ಅಲೆಮಾರಿಗಳಂತಹ ತಬ್ಬಲಿ ತಳಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ, ಸಂಶೋಧನೆ ಕುರಿತಂತೆ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುವ ಮಹತ್ವದ ಕೆಲಸ ಮಾಡುತ್ತಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದೆ ನಿರ್ಲಕ್ಷಿಸುತ್ತಿರುವುದು ಅಕ್ಷಮ್ಯ. ಇದು ಕನ್ನಡಕ್ಕೆ ಮಾಡುತ್ತಿರುವ ದ್ರೋಹ ಮಾತ್ರವಲ್ಲ, ಕನ್ನಡ ನಾಡು, ನುಡಿ, ಜನತೆಗೆ ಮಾಡುತ್ತಿರುವ ದ್ರೋಹ. ಕನ್ನಡ ನಾಡಿನ ಬಗ್ಗೆ ಸರ್ಕಾರಕ್ಕೆ ಕನಿಷ್ಠ ಕಾಳಜಿ, ಗೌರವವಿದ್ದರೆ ಒಂದು ಕ್ಷಣವೂ ತಡಮಾಡದೆ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡಬೇಕು.

-ಸಿ.ಎಸ್.ದ್ವಾರಕಾನಾಥ್, ಮಾಜಿ ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ

***
ಕನ್ನಡ ವಿವಿ ಕನ್ನಡ ಅಸ್ಮಿತೆಯನ್ನು ಕಟ್ಟುವ ಕೆಲಸದ ಒಂದು ಭಾಗ. ಕನ್ನಡ ಸಂಸ್ಕೃತಿಯ ಪರಂಪರೆಯ ಸಂಶೋಧನೆ ಹಾಗೂ ವರ್ತಮಾನದ ಚಿಂತನೆ ನಡೆಸುವುದಕ್ಕಾಗಿ, ದೇಸೀ ಜ್ಞಾನ ಕೋಶವನ್ನು ನಿರ್ಮಿಸುವುದಕ್ಕಾಗಿ ಇರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ಉಂಟಾಗಿರುವುದು ಖಂಡನೀಯ. ಕನ್ನಡ ವಿಶ್ವವಿದ್ಯಾಲಯದ ಪೋಷಣೆಗೆ ಸರ್ಕಾರ ತಕ್ಷಣ ಅನುದಾನ ಒದಗಿಸಬೇಕು. ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಇಲ್ಲದ ಅನುದಾನದ ಕೊರತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೆಯೆಂದರೆ ಏನರ್ಥ?

-ಬಂಜಗೆರೆ ಜಯಪ್ರಕಾಶ್, ಸಂಸ್ಕೃತಿ ಚಿಂತಕರು

***

ಕನ್ನಡ, ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂತಾದವುಗಳ ಸಂಶೋಧನೆಗಾಗಿಯೇ ಉದಿಸಿದ, ಆ ಕ್ಷೇತ್ರಗಳಲ್ಲಿ ಜ್ಞಾನ ಸೃಷ್ಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೂ ತಮಗೆ ಸಂಲಗ್ನಗೊಂಡ ನೂರಾರು ಕಾಲೇಜುಗಳು, ಸ್ನಾತಕೋತ್ತರ ವಿಭಾಗಗಳು ಹಾಗೂ ಇತರ ಮೂಲಗಳಿಂದ ಒಂದು ಸೀಮಿತ ಪ್ರಮಾಣದಲ್ಲಿ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಲು ಅವಕಾಶವಿರುವ ರಾಜ್ಯದ ಇತರೇ ವಿಶ್ವವಿದ್ಯಾಲಯಗಳಿಗೂ ವ್ಯತ್ಯಾಸವಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ರಾಜ್ಯ ಸರ್ಕಾರ ಒದಗಿಸುವ ಅನುದಾನ ಮತ್ತು ಕೆಲ ಸಂಘ ಸಂಸ್ಥೆಗಳು ಒದಗಿಸುವ ಸಹಕಾರದಿಂದ ಮಾತ್ರ ಮುನ್ನಡೆಯುತ್ತಿರುವ ಸಂಸ್ಥೆ. ಅದು ಈಗ ತೀವ್ರ ಆರ್ಥಿಕ ಕೊರತೆಯನ್ನು ಅನುಭವಿಸುತ್ತಿರುವದು ಖೇದದ ವಿಷಯ. ಹೊಸ ತಲೆಮಾರಿನ ವಿದ್ವಾಂಸರು ವಿಭಿನ್ನ ನಿಟ್ಟಿನಿಂದ ನಾಡು-ನುಡಿಗಳ ಕುರಿತು ಅಧ್ಯಯ ನಡೆಸಲು ಬಯಸುವ ಪ್ರಸ್ತುತ ಸಂದರ್ಭದಲ್ಲಿ ಅವರ ಸಂಶೋಧನ ಯೋಜನೆಗಳಿಗೆ, ಸಿಬ್ಬಂದಿಯ ಸಂಬಳಕ್ಕೆ ಕೊರತೆ ಉಂಟಾಗುವದು ಬರೀ ಆ ವಿಶ್ವವಿದ್ಯಾಲಯಕ್ಕೆ ಮಾತ್ರವಲ್ಲ, ಕನ್ನಡ ಅಸ್ಮಿತೆಗೆ ಸಂಬಂಧಿಸಿದಂತೆ ಕೂಡ ಕಳವಳಕಾರಿಯಾದುದು.

-ಡಾ. ಅಶೋಕ್ ಶೆಟ್ಟರ್, ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT