ಬೆಂಗಳೂರು: ‘ಬದುಕಿನ ಬಂಡಿ ಹಿಂದಕ್ಕೆ ಚಲಿಸುವಂತೆ ಮಾಡುವ ಗೇರ್ ಇಲ್ಲ. ಹಾಗಾಗಿ ಕಳೆದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಇರುವ ಪ್ರತಿ ಕ್ಷಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯು ಭಾನುವಾರ ಆಯೋಜಿಸಿದ್ದ ಶತಮಾನೋತ್ಸವ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಧನೆಗೆ ಜಾತಿ, ಧರ್ಮ, ಬಡತನ ಹಾಗೂ ಹುಟ್ಟು ಕಾರಣವಲ್ಲ.ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯ. ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ’ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಡಾ.ಕರಿಸಿದ್ದಪ್ಪ, ‘ರಾಜ್ಯದ ಅನೇಕ ಮಠಗಳು ವೈದ್ಯಕೀಯ ಹಾಗೂಎಂಜಿನಿಯರಿಂಗ್ ಶಿಕ್ಷಣ ಆರಂಭಿಸಿವೆ. ಇದರಿಂದ ಸಾಮಾನ್ಯರಿಗೂ ಉನ್ನತ ಶಿಕ್ಷಣ ದೊರೆಯುವಂತಾಗಿದೆ. ಶಿಕ್ಷಣಕ್ಕೆ ಮಠಗಳ ಪಾತ್ರ ಮಹತ್ವದ್ದು’ ಎಂದರು.
ಕಾರ್ಯಕ್ರಮದಲ್ಲಿ 320 ವಿದ್ಯಾರ್ಥಿಗಳಿಗೆವಿದ್ಯಾರ್ಥಿ ವೇತನ ವಿತರಿಸಲಾಯಿತು.