ಹೆಸರಘಟ್ಟ: ಕಾಕೋಳು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ರೈತರು, ಹಾಲನ್ನು ತಿಪ್ಪೆಗೆ ಸುರಿಯುತ್ತಿದ್ದಾರೆ.
ಕಾಕೋಳು ಗ್ರಾಮವನ್ನು ಸೀಲ್ಡೌನ್ ಮಾಡಿದ್ದರಿಂದ, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಕೂಡ ಸ್ಥಗಿತಗೊಳಿಸಲಾಗಿದೆ.
‘ಗ್ರಾಮದಲ್ಲಿ 135 ರೈತರು ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದು, ದಿನಕ್ಕೆ 1,600 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.ಗ್ರಾಮದಲ್ಲಿರುವ ಶೇಕಡ 98 ಮನೆಗಳಲ್ಲಿ ಹಸುಗಳು ಇವೆ. ಮನೆಗೆ ಸಾಕಾಗುವಷ್ಟು ತೆಗೆದುಕೊಂಡು ಉಳಿದ ಹಾಲನ್ನು ಡೇರಿಗೆ ಹಾಕುತ್ತಿದ್ದೆವು. ಈಗ, ಡೇರಿಯವರು ಹಾಲನ್ನು ಹಾಕಿಸಿಕೊಳ್ಳುತ್ತಿಲ್ಲ. ಉಳಿದ ಹಾಲನ್ನು ಅನಿವಾರ್ಯವಾಗಿ ತಿಪ್ಪೆಗೆ, ಹುತ್ತಕ್ಕೆ ಸುರಿಯುತ್ತಿದ್ದೇವೆ’ ಎಂದು ಗ್ರಾಮದ ರೈತ ಅಂಜನಗೌಡ ಬೇಸರ ವ್ಯಕ್ತಪಡಿಸಿದರು.
‘ಹಾಲು ಮಾರಾಟದಿಂದ ಬರುವ ದುಡ್ಡಿನಿಂದ ಹಸುಗಳಿಗೆ ಹಿಂಡಿ, ಬೂಸಾ ತರುತ್ತಿದ್ದೆವು. 15 ದಿನಗಳಿಂದ ಡೇರಿಗೆ ಹಾಲು ಹಾಕಲು ಸಾಧ್ಯವಾಗಿಲ್ಲ. ಹಿಂಡಿ ತರಲು ದುಡ್ಡಿಲ್ಲದೆ ಇರುವುದರಿಂದ ಹಸುಗಳನ್ನು ಕೆರೆ ಹತ್ತಿರ ಕರೆದುಕೊಂಡು ಹೋಗಿ ಮೇಯಿಸಿಕೊಂಡು ಬರುತ್ತಿದ್ದೇವೆ’ ಎಂದು ಅವರು ಹೇಳಿದರು.
ರೈತರಿಗೆ ಪರಿಹಾರ:‘ಸೀಲ್ಡೌನ್ ಮಾಡಿರುವುದರಿಂದ ಹಾಲು ಉತ್ಪಾದಕರಿಗೆ ಕಷ್ಟವಾಗಿದೆ.ಸಂಸ್ಥೆಯಲ್ಲಿ ಇರುವ ಲಾಭಾಂಶದ ಹಣದಲ್ಲಿ ರೈತರಿಗೆ ಪರಿಹಾರ ಕೊಡಬೇಕು ಎಂದು ಎಲ್ಲ ಸದಸ್ಯರು ಒತ್ತಾಯಿಸಿದ್ದಾರೆ. ಈ ಕುರಿತು ಎಲ್ಲರೊಂದಿಗೆ ಚರ್ಚಿಸಿ, ರೈತರಿಗೆ ಪರಿಹಾರ ರೂಪದಲ್ಲಿ ಸ್ವಲ್ಪ ಹಣ ನೀಡುತ್ತೇವೆ’ ಎಂದುಕಾಕೋಳು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ವಿಜೇತ್ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.