ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ‘ಲೈಂಗಿಕ ಶಿಕ್ಷಣದ ಬಗ್ಗೆ ಜಾಗೃತಿ ಅಗತ್ಯ’

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆ
Published 3 ಏಪ್ರಿಲ್ 2024, 15:56 IST
Last Updated 3 ಏಪ್ರಿಲ್ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ‘ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಸಮಾಜದಲ್ಲಿ ಬೇರೂರಿರುವ ತಪ್ಪು ಪರಿಕಲ್ಪನೆಯನ್ನು ಹೋಗಲಾಡಿಸಿ, ಅವರಿಗೂ ಗೌರವ ಮತ್ತು ಘನತೆಯ ಬುದುಕಿಗೆ ಅವಕಾಶ ನೀಡಬೇಕು’ ಎಂಬ ಅಭಿಪ್ರಾಯ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ವ್ಯಕ್ತವಾಯಿತು. 

ಅಖಿಲ ಭಾರತ ಲೈಂಗಿಕ ಕಾರ್ಯಕರ್ತೆಯರ ಸಂಘಟನೆ (ಎಐಎನ್‌ಎಸ್‌ಡಬ್ಲ್ಯು) ಹಾಗೂ ಅಲೈನ್ಸ್ ಇಂಡಿಯಾ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡ ಈ ಸಭೆಯಲ್ಲಿ ‘ಮಹಿಳೆಯರು, ಬಾಲಕಿಯರು ಮತ್ತು ಅಂಚಿನ ಸಮುದಾಯಗಳಲ್ಲಿ ಲಿಂಗತ್ವ ಸಂವೇದನೆ’ ವಿಷಯದ ಮೇಲೆ ಚರ್ಚಿಸಲಾಯಿತು.

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಕುಲಪತಿ ವಿಕ್ಟರ್ ಲೋಬೊ ಎಸ್.ಜೆ.,‘ಲೈಂಗಿಕ ಕಾರ್ಯಕರ್ತೆಯರನ್ನು ಸಮಾಜ ಈಗಲೂ ಒಪ್ಪಿಕೊಂಡಿಲ್ಲ. ಇದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಅಂತಹವರಿಗೆ ಸಾಂತ್ವನ ಅಗತ್ಯ. ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು. ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ಯುವಜನರು ತಪ್ಪು ಹಾದಿ ಹಿಡಿಯುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು. 

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಕೆ. ದ್ವಾರಕನಾಥ್ ಬಾಬು, ‘ಅನಿವಾರ್ಯ ಕಾರಣಗಳಿಂದ ಕೆಲವರು ಲೈಂಗಿಕ ಕಾರ್ಯಕರ್ತೆಯರಾಗುತ್ತಾರೆ. ಆದ್ದರಿಂದ ಮಹಿಳೆಯರ ಸಬಲೀಕರಣಕ್ಕೆ ಕ್ರಮಕೈಗೊಳ್ಳಬೇಕು. ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು. ಲೈಂಗಿಕ ವೃತ್ತಿ ಹಲವು ದೇಶಗಳಲ್ಲಿ ಕಾನೂನುಬದ್ಧವಾಗಿದೆ. ನಮ್ಮಲ್ಲಿ ಜಾಗೃತಿ ಕೊರತೆಯಿಂದ ಈ ಸಮುದಾಯದವರು ವಿವಿಧ ರೀತಿಯ ಹಿಂಸೆ ಅನುಭವಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಎಐಎನ್‌ಎಸ್‌ಡಬ್ಲ್ಯು ಕೋರ್ ಕಮಿಟಿ ಸದಸ್ಯ ಅಕ್ರಮ್ ಪಾಷಾ, ‘ಲೈಂಗಿಕ ಕಾರ್ಯಕರ್ತೆಯರು ಕೂಡ ಕಾನೂನಿನ ಅಡಿಯಲ್ಲಿ ಘನತೆಯಿಂದ ಬದುಕಲು ಹಾಗೂ ಸಮಾನ ರಕ್ಷಣೆಯನ್ನು ಪಡೆಯಲು ಅರ್ಹರೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಈಗಲೂ ಅವರ ಮೇಲೆ ವಿವಿಧ ರೀತಿಯ ಶೋಷಣೆಗಳು ನಡೆಯುತ್ತಿವೆ. ಅವರ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಅಧಿಕಾರಿಗಳು ಅರಿವಿನ ಕೊರತೆಯಿಂದ ಅವರಿಗೆ ತೊಂದರೆ ನೀಡುತ್ತಿದ್ದಾರೆ. ಅವರಿಗೂ ಘನತೆಯಿಂದ ಬದುಕಲು ಅವಕಾಶ ನೀಡಿ, ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT