ಪೀಣ್ಯ ದಾಸರಹಳ್ಳಿ: ನಾಗಸಂದ್ರ ಮೆಟ್ರೊ ಸ್ಟೇಷನ್ ಪ್ರವೇಶ ದ್ವಾರದ ಬಳಿ ಕುಸಿದಿದ್ದ ರಸ್ತೆಯನ್ನು ಜಲಮಂಡಳಿ ಅಧಿಕಾರಿಗಳು ಗುರುವಾರ ಸರಿಪಡಿಸಿದ್ದಾರೆ.
ಮೆಟ್ರೊ ಸ್ಟೇಷನ್ ಪ್ರವೇಶ ದ್ವಾರದ ಬಳಿ ಮಂಜುನಾಥ ನಗರದ ಕಡೆ ಹೋಗುವ ರಸ್ತೆಯಲ್ಲಿ 5 ದಿನಗಳ ಹಿಂದೆ ಭಾರಿ ವಾಹನವೊಂದು ಚಲಿಸಿದ್ದರಿಂದ ರಸ್ತೆ ಕುಸಿದಿತ್ತು. ನೀರಿನ ಸಂಪರ್ಕಕ್ಕಾಗಿ ಪೈಪ್ ಅಳವಡಿಸಲು ಜಲಮಂಡಳಿ ಗುಂಡಿ ತೆಗೆದಿತ್ತು. ಕಾಮಗಾರಿ ಮುಗಿದ ಮೇಲೆ ಸಮರ್ಪಕವಾಗಿ ಮುಚ್ಚದೇ ಇರುವುದು ರಸ್ತೆ ಕುಸಿಯಲು ಕಾರಣವಾಗಿತ್ತು. ಮೆಟ್ರೊ ರೈಲು ನಿಲ್ದಾಣಕ್ಕೆ ಬಂದು ಹೋಗುವವರಿಗೆ ಇದರಿಂದ ತೊಂದರೆಯಾಗುತ್ತಿತ್ತು.
ಈ ಸಮಸ್ಯೆಯ ಬಗ್ಗೆ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಜಲ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ಕುಸಿದಿದ್ದ ಗುಂಡಿಯನ್ನು ಮುಚ್ಚಿಸಿ ಅದರ ಮೇಲೆ ಜಲ್ಲಿಕಲ್ಲು ಹಾಕಿಸಿದ್ದಾರೆ.
‘ನೀರಿನ ಪೈಪ್ ನೇರ ಸಂಪರ್ಕ ಕಲ್ಪಿಸಿ ಗುಂಡಿಯನ್ನು ಮುಚ್ಚಿದ್ದೇವೆ. ಒಂದೆರಡು ದಿನಗಳ ನಂತರ ಕಾಂಕ್ರೀಟ್ ಹಾಕಲಾಗುತ್ತದೆ’ ಎಂದು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.