ಯಲಹಂಕ: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬಾರದು ಎಂದು ಒತ್ತಾಯಿಸಿ, ಆವಲಹಳ್ಳಿ ಸಮೀಪದ ಪ್ರೆಸಿಡೆನ್ಸಿ ಶಾಲೆಯ ಮಕ್ಕಳ ಪೋಷಕರ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಎಚ್.ಶಿವರಾಮೇಗೌಡರ ಬಣ) ಕಾರ್ಯಕರ್ತರು ಆರೋಪಿಸಿದ್ದಾರೆ.
ಕನ್ನಡ ಬೇಡ ಎಂದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಬಾರದು ಎಂದು ಆಗ್ರಹಿಸಿ, ಶಾಲೆಯ ಆಡಳಿತ ಮಂಡಳಿಯವರಿಗೆ ಪತ್ರ ಬರೆದಿದ್ದಾರೆ.
ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರು ಮಾತನಾಡಿ,‘ಕನ್ನಡೇತರರಾದ ವಲಸಿಗ ಪೋಷಕರು ವಾಟ್ಸ್ಆ್ಯಪ್ನಲ್ಲಿ ಕನ್ನಡ ವಿರೋಧಿ ಅಭಿಯಾನ ಆರಂಭಿಸಿದ್ದಾರೆ. ನಾವು ಕನ್ನಡ ಭಾಷೆಯನ್ನು ಕಲಿಯುವುದಿಲ್ಲ. ಕನ್ನಡಭಾಷೆ ವಿಷಯ ತೆಗೆದುಕೊಳ್ಳುವುದರಿಂದ ವಿನಾಯಿತಿ ನೀಡಬೇಕು ಎಂದು ಈವರೆಗೆ ಸುಮಾರು 2,500 ಸಹಿ ಸಂಗ್ರಹಿಸಿದ್ದಾರೆ’ ಎಂದು ದೂರಿದರು.
‘ಇಲ್ಲಿನ ನೆಲ-ಜಲ ಸೇರಿದಂತೆ ಸಕಲ ಸೌಲಭ್ಯಗಳನ್ನು ಅನುಭವಿಸಿ, ಕನ್ನಡಭಾಷೆ ಕಲಿಯಲು, ಮಾತನಾಡಲು ಇಚ್ಛಿಸದ ವಲಸಿಗರು ರಾಜ್ಯದಲ್ಲಿ ಏಕೆ ಇರಬೇಕು’ ಎಂದು ಅವರು ಪ್ರಶ್ನಿಸಿದರು.
‘ಪೋಷಕರ ಇಂತಹ ನಡೆ ನಾಡಿನ ಜನರ ಭಾವನೆಗೆ ಧಕ್ಕೆ ತರುವ ವಿಷಯವಾಗಿದೆ. ಕನ್ನಡ ಭಾಷೆ ಬೇಡ ಎನ್ನುವವರು ನಮ್ಮ ಶಾಲೆಗೆ ಅವಶ್ಯಕತೆಯಿಲ್ಲ ಎಂಬ ನಿರ್ಧಾರವನ್ನು ಶಾಲೆಯ ಆಡಳಿತ ಮಂಡಳಿ ತೆಗೆದುಕೊಳ್ಳಬೇಕು. ಅಂತಹ ಪೋಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು’ ಎಂದು ಅವರು ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.