ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್‌ ಸಮೀಕ್ಷೆ – ಯಶವಂತಪುರ : ಸೋಮಶೇಖರ್ ಹಿಡಿತ ಸಡಿಲಕ್ಕೆ ಅನುಕಂಪದ ಎರಕ

Published 5 ಮೇ 2023, 23:11 IST
Last Updated 5 ಮೇ 2023, 23:11 IST
ಅಕ್ಷರ ಗಾತ್ರ

ವಿಜಯಕುಮಾರ್‌ ಎಸ್‌.ಕೆ

ಬೆಂಗಳೂರು: ಗ್ರಾಮೀಣ ಮತ್ತು ನಗರ ಪ್ರದೇಶ  ಒಳಗೊಂಡ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌.ಟಿ. ಸೋಮಶೇಖರ್ ಬಿಗಿ ಹಿಡಿತವನ್ನು ಅನುಕಂಪದ ಎರಕದ ಮೂಲಕ ಸಡಿಲಗೊಳಿಸಲು ಜೆಡಿಎಸ್‌ ಪ್ರಯತ್ನಿಸುತ್ತಿದೆ.

‌ಕಾಂಗ್ರೆಸ್‌ ತೆಕ್ಕೆಯಿಂದ ಬಿಜೆಪಿಗೆ ಹೊರಳಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲೀಗ ಪಕ್ಷಕ್ಕಿಂತ ಶಾಸಕ ಎಸ್‌.ಟಿ. ಸೋಮಶೇಖರ್ ಹಿಡಿತ ಹೆಚ್ಚಿದೆ. ಮೂರು ಬಾರಿ ಪೈಪೋಟಿ ನೀಡಿ ಸೋತಿರುವ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಈ ಬಾರಿ ಪುಟಿದೇಳುವ ತವಕದಲ್ಲಿದ್ದಾರೆ.

ತುಮಕೂರು ರಸ್ತೆಯ ಚಿಕ್ಕಬಿದರಕಲ್ಲಿನಿಂದ ಆರಂಭವಾಗಿ ಮೈಸೂರು ರಸ್ತೆ ದಾಟಿ ಕನಕಪುರ ರಸ್ತೆಯ ಕಗ್ಗಲಿಪುರ ತನಕ, ಇತ್ತ ಮೈಸೂರು ರಸ್ತೆಯಲ್ಲಿ ಬಿಡದಿವರೆಗೆ, ಮಾಗಡಿ ರಸ್ತೆಯಲ್ಲಿ ತಿಪ್ಪಗೊಂಡನಹಳ್ಳಿ ಹತ್ತಿರಕ್ಕೆ ಈ ಕ್ಷೇತ್ರ ವ್ಯಾಪಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಕ್ಷೇತ್ರ ಒಳಗೊಂಡಿದೆ.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಮೊದಲ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಟಿ. ಸೋಮಶೇಖರ್ ಸೋಲು ಕಂಡಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಬಳಿಕ ಸೋಲು ಕಂಡಿಲ್ಲ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ‘ಆಪರೇಷನ್ ಕಮಲ’ಕ್ಕೆ ಒಳಗಾದರು. ಬಿಜೆಪಿ ಸೇರಿ ಸಚಿವರಾಗಿ 2019ರ ಆಗಸ್ಟ್‌ನಲ್ಲಿ ಎದುರಿಸಿದ ಚುನಾವಣೆಯಲ್ಲೂ ಗೆದ್ದರು.

ಮೂರು ಬಾರಿಯೂ ಪ್ರಬಲ ಪೈಪೋಟಿ ನೀಡಿರುವ ಜೆಡಿಎಸ್‌ನ ಟಿ.ಎನ್. ಜವರಾಯಿಗೌಡ ಈಗ ನಾಲ್ಕನೇ ಬಾರಿ ಎದುರಾಳಿಯಾಗಿದ್ದಾರೆ. ಸತತ ಸೋಲಿನಿಂದ ಬೇಸರಗೊಂಡಿದ್ದ ಅವರಿಗೆ ಕಾರ್ಯಕರ್ತರ ಜತೆಗೆ ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ಆತ್ಮವಿಶ್ವಾಸ ತುಂಬಿ ಸ್ಪರ್ಧೆಗೆ ಇಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದ ಮತದಾರರಿದ್ದಾರೆ. ಕಣದಲ್ಲಿರುವ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳೂ ಒಂದೇ ಸಮುದಾಯದವರಾಗಿದ್ದಾರೆ. ಜೆಡಿಎಸ್‌ ಸರ್ಕಾರ ಬೀಳಿಸಲು ಕಾರಣವಾದ 17 ಶಾಸಕರಲ್ಲಿ ಎಸ್‌.ಟಿ.ಸೋಮಶೇಖರ್ ಕೂಡ ಒಬ್ಬರು. ಎಚ್.ಡಿ.ಕುಮಾರಸ್ವಾಮಿ ಪರ ಅಲೆಯ ಜತೆಗೆ ಜವರಾಯಿಗೌಡ ಅವರ ಬಗ್ಗೆ ಇರುವ ಅನುಕಂಪ ವರವಾಗಬಹುದು ಎಂಬ ಲೆಕ್ಕಾಚಾರವನ್ನು ಜೆಡಿಎಸ್‌ ಹೊಂದಿದೆ. ಕೋವಿಡ್‌ ಸಂದರ್ಭದಲ್ಲಿ ಜನರೊಟ್ಟಿಗೆ ನಿಲ್ಲಲಿಲ್ಲ ಎಂಬ ಆರೋಪವೂ ಜವರಾಯಿಗೌಡ ಅವರ ಮೇಲಿದೆ.

‘ಜನರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸಿದ್ದೇನೆ. ಕೋವಿಡ್ ಕಷ್ಟ ಕಾಲದಲ್ಲಿ ಅವರ ಜೊತೆಯಲ್ಲಿದ್ದೆ. ಅಭಿವೃದ್ಧಿ ಕೆಲಸಗಳಿಗೆ ಜನ ಮತ ಹಾಕಲಿದ್ದಾರೆ’ ಎಂಬ ವಿಶ್ವಾಸದಲ್ಲಿ ಸೋಮಶೇಖರ್ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಕಾರ್ಯಕರ್ತರ ಹುರುಪು ಹೆಚ್ಚಿಸಿದ್ದಾರೆ.

ಮೇಲ್ನೋಟಕ್ಕೆ ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ಎಂಬಂತೆ ಕಾಣಿಸುತ್ತಿದೆ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್‌ ಪರವಾದ ಅಲೆಯಲ್ಲಿ ತೇಲುವ ವಿಶ್ವಾಸವನ್ನು ಕಾಂಗ್ರೆಸ್‌ ಅಭ್ಯರ್ಥಿ ಬಾಲರಾಜ್‌ಗೌಡ ಹೊಂದಿದ್ದಾರೆ. ಮೂರು ಪಕ್ಷಗಳ ಕಾರ್ಯಕರ್ತರ ಪಡೆಗಳು ಕೆಲಸ ಮಾಡುತ್ತಿವೆ. ಎಎಪಿ, ಬಿಎಸ್‌ಪಿ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿ ಇದ್ದಾರೆ.

ಬಾಲರಾಜ್‌ಗೌಡ
ಬಾಲರಾಜ್‌ಗೌಡ
ಜವರಾಯಿಗೌಡ
ಜವರಾಯಿಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT