ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್ಕಾಪ್ಸ್) ವತಿಯಿಂದ ‘ಮಾವು ಹಾಗೂ ಹಲಸು ಮಾರಾಟ ಮೇಳ’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ಹಡ್ಸನ್ ವೃತ್ತದ ಮಾರಾಟ ಮಳಿಗೆಯಲ್ಲಿ ಆರಂಭವಾದ ಮೇಳವನ್ನುಸ್ವಾತಂತ್ರ್ಯ ಹೋರಾಟಗಾರ ಎಚ್.ಎನ್.ದೊರೆಸ್ವಾಮಿ ಉದ್ಘಾಟಿಸಿದರು.
ಹಾಪ್ಕಾಮ್ಸ್ನಲ್ಲಿ ಮಾರಾಟವಾಗುವ ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಮಾಗಿಸಲಾಗುತ್ತದೆ. ಕಾರ್ಬೊಹೈಡ್ರೇಟ್ ಮುಕ್ತ ಮಾವಿನ ಹಣ್ಣನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಹಾಪ್ಕಾಮ್ಸ್ನ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಮೇಳ ಆರಂಭವಾಗಿದೆ.
ಮಾಲೂರು, ಕೋಲಾರ, ಹೊಸಕೋಟೆ, ರಾಮನಗರ, ಚನ್ನಪಟ್ಟಣ, ತುಮಕೂರಿನಿಂದ ಮಾವಿನ ಹಣ್ಣುಗಳನ್ನು ತರಿಸಲಾಗಿದೆ. ಹಲಸಿನ ಹಣ್ಣುಗಳು ಕುಣಿಗಲ್ನಿಂದ ಮೇಳಕ್ಕೆ ಬಂದಿವೆ. ಎಲ್ಲಾ ತಳಿಯ ಮಾವಿನ ಹಣ್ಣುಗಳನ್ನು ಶೇ 10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
‘ನಮ್ಮ ಸಂಸ್ಥೆ ವಾರ್ಷಿಕ ₹100 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ. ಈ ವರ್ಷ 1,000 ಟನ್ ಮಾವು ಹಾಗೂ 200 ಟನ್ ಹಲಸಿನ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ’ ಎಂದು ಹಾಪ್ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಮಾಹಿತಿ ನೀಡಿದರು. ಸಿನಿಮಾ ನಿರ್ದೇಶಕ ಬಿ.ಎಸ್.ಲಿಂಗ ದೇವರು,ಹಾಪ್ಕಾಮ್ಸ್ ಉಪಾಧ್ಯಕ್ಷ ಬಿ. ಮುನೇಗೌಡ,ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ಭಾಗವಹಿಸಿದ್ದರು.