ಖಟಕಚಿಂಚೋಳಿ: ಹೋಬಳಿಯ ಡಾವರಗಾಂವ್ ಗ್ರಾಮದ ರೈತ ಅಭಿಮನ್ಯು ಪಾಟೀಲ ತಮ್ಮ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಅವರೆ ಬೆಳೆ ಹೆಚ್ಚಿನ ಆದಾಯ ತಂದುಕೊಡುವುದರೊಂದಿಗೆ ಹುರುಳಿಕಾಯ ಬೆಳೆಯಿಂದ ಆದ ನಷ್ಟವನ್ನು ಸರಿದೂಗಿಸಿದೆ.
ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿ ಬೆಲೆಗಳು ಗಗನಕ್ಕೇರಿವೆ. ಅವುಗಳ ಸಾಲಿನಲ್ಲಿ ಅವರೆಯೂ ಒಂದಾಗಿದೆ. ಬಿನ್ನಿಸ್ ಬೆಳೆಯಿಂದ ಆದ ನಷ್ಟದಲ್ಲಿರುವಾಗ ಅವರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ತಂದುಕೊಟ್ಟಿದೆ' ಎಂದು ರೈತ ಸಂತಸ ವ್ಯಕ್ತಪಡಿಸುತ್ತಾರೆ.
‘ಬಿತ್ತನೆ ಮಾಡಿದ 60 ರಿಂದ 70 ದಿನಗಳಲ್ಲಿ ಅವರೆಕಾಯಿ ಕಟಾವಿಗೆ ಬರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಅವರೆ ಪ್ರತಿ ಕ್ವಿಂಟಾಲ್ಗೆ ₹5 ರಿಂದ ₹6 ಸಾವಿರಕ್ಕೆ ಮಾರಾಟ ಆಗುತ್ತಿದೆ. ಬೆಳೆಯೂ ಹುಲುಸಾಗಿ ಬೆಳೆದಿದ್ದು ಪ್ರತಿ ದಿನಕ್ಕೆ ಒಂದು ಕ್ವಿಂಟಾಲ್ನಂತೆ ಇಳುವರಿ ಬರುತ್ತಿದೆ' ಎನ್ನುತ್ತಾರೆ ರೈತ ಅಭಿಮನ್ಯು ಪಾಟೀಲ.
‘ಅವರೆಯನ್ನು ಹೊಲ ಹದ ಮಾಡಿ 2ರಿಂದ 4 ಅಡಿ ಅಂತರದಲ್ಲಿ ಬಿತ್ತನೆ ಮಾಡಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಸಿಂಪಡಣೆ ಸೇರಿದಂತೆ ಇನ್ನಿತರ ಖರ್ಚು ಸೇರಿ ₹30 ಸಾವಿರದವರೆಗೆ ಆಗಿದೆ. ಅದಕ್ಕೆ ತಕ್ಕಂತೆ ದುಪ್ಪಟ್ಟು ಪ್ರಮಾಣದಲ್ಲಿ ಆದಾಯ ಲಭಿಸುತ್ತಿದೆ' ಎಂದು ತಿಳಿಸುತ್ತಾರೆ.
ಸಾಮಾನ್ಯವಾಗಿ ಅವರೆಕಾಯಿ ಬೆಳೆಗೆ ಕೀಟಬಾಧೆ ಸಮಸ್ಯೆ ನಿರಂತರ ಕಾಡುತ್ತದೆ. ಇದರಿಂದ ರೈತರು ಎದೆಗುಂದದೆ ಒಂದು ಲೀಟರ್ ನೀರಿಗೆ ಅರ್ಧ ಎಂ.ಎಲ್ ಫೇಮ್ ಮಿಶ್ರಣವನ್ನು ಸೇರಿಸಿ ಸಿಂಪಡಿಸಬೇಕು. ಅಥವಾ 1 ಲೀಟರ್ ನೀರಿಗೆ ಅರ್ಧ ಗ್ರಾಂ ಪ್ರೋಕ್ಲೆಮ್ ಬೆರೆಸಿ ಸಿಂಪಡಿಸಬೇಕು. ಇದರಿಂದ ಕೀಟಗಳು ನಿಯಂತ್ರಣಕ್ಕೆ ಬರುತ್ತವೆ' ಎಂದು ತೋಟಗಾರಿಕಾ ವಿಜ್ಞಾನಿ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ತಿಳಿಸುತ್ತಾರೆ.
65 ರಿಂದ70 ದಿನದಿಂದಲೇ ಅವರೆ ಕಾಯಿ ಕಟಾವು ಪ್ರತಿ ಕೆ.ಜಿ.ಗೆ ₹ 50ರಿಂದ ₹ 60ಕ್ಕೆ ಮಾರಾಟ ಕಡಿಮೆ ಬಂಡವಾಳ, ಹೆಚ್ಚಿನ ಲಾಭ
'ರೈತರು ಪ್ರತಿ ವರ್ಷ ಒಂದೇ ಬೆಳೆ ಬೆಳೆಯುವ ಬದಲು ಬೆಳೆ ಪರಿವರ್ತನೆ ಪದ್ಧತಿ ಅನುಸರಿಸುವುದರಿಂದ ಅಧಿಕ ಲಾಭ ಗಳಿಸಬಹುದು’ ಎಂದು ರೈತ ಹೇಳುತ್ತಾರೆ.
ತೋಟಗಾರಿಕೆ ಬೆಳೆಗಳು ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ತಂದುಕೋಡುತ್ತವೆ. ಹೀಗಾಗಿ ರೈತರು ಬೇರೆ ಬೇರೆ ವಿಧದ ತೋಟಗಾರಿಕೆ ಬೆಳೆ ಬೆಳೆದು ಹೆಚ್ಚಿನ ಲಾಭ ಪಡೆದುಕೋಳ್ಳಬೇಕು