ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ: ಶೈಲೇಂದ್ರ

ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿಶ್ವಾಸ
Published 18 ಮೇ 2024, 14:22 IST
Last Updated 18 ಮೇ 2024, 14:22 IST
ಅಕ್ಷರ ಗಾತ್ರ

ಬೀದರ್‌: ‘ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖರು ಹಾಗೂ ಪಕ್ಷದ ಜಿಲ್ಲಾ, ಮಂಡಲ ಪ್ರಮುಖರ ಅವಲೋಕನ ಸಭೆ ಉದ್ದೇಶಿಸಿ ಮಾತನಾಡಿದರು.

‘ಆಯಾ ವಿಧಾನಸಭೆ ಕ್ಷೇತ್ರವಾರು ಪ್ರಮುಖರು ನೀಡಿದ ಅಂಕಿ-ಅಂಶ, ಸಮಗ್ರ ಮಾಹಿತಿ ಹಾಗೂ ಕ್ಷೇತ್ರದಲ್ಲಿ ಕಂಡಿದ್ದಂತಹ ಮೋದಿ ಅಲೆ ಲೆಕ್ಕಾಚಾರದಲ್ಲಿ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ ಮೂರನೇ ಬಾರಿಯೂ ಭರ್ಜರಿ ಜಯ ಗಳಿಸುವುದು ನಿಶ್ಚಿತ. ಕ್ಷೇತ್ರದಲ್ಲಿ ಕಾಂಗ್ರೆಸ್ ನವರ ಹಣಬಲದ ಆಟಕ್ಕೆ ಮತದಾರರು ಮನ್ನಣೆ ನೀಡಿಲ್ಲ. ದೇಶದ ಹಿತದಿಂದ, ಸಮಾಜದ ಹಿತದಿಂದ ಬಿಜೆಪಿಗೆ ಭರಪೂರ ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ. ಗೆಲುವು ನಮ್ಮದೇ’ ಎಂದರು.

‘ಪಕ್ಷ ನೀಡಿದ ಜವಾಬ್ದಾರಿಯನ್ನು ಎಲ್ಲರೂ ಸಮರ್ಪಕವಾಗಿ ನಿರ್ವಹಿಸಿ ಚುನಾವಣೆಯನ್ನು ಸಮರ್ಥ ಹಾಗೂ ಯಶಸ್ವಿಯಾಗಿ ಎದುರಿಸಿದ್ದೇವೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷದ ಕೆಲಸ ನಿರಂತರ ಇರುತ್ತದೆ. ಈಗ ಲೋಕಸಭೆ ಚುನಾವಣೆ ಮುಗಿದಿದೆ. ಇದರೊಟ್ಟಿಗೆ ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಜೂನ್ 3ರಂದು ನಡೆಯಲಿದೆ. ಎಲ್ಲರೂ ನಮ್ಮ ಅಭ್ಯರ್ಥಿ ಅಮರನಾಥ ಪಾಟೀಲ ಅವರ ಗೆಲುವಿಗಾಗಿ ಶ್ರಮಿಸಬೇಕು. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ತಳಮಟ್ಟದಿಂದ ಸಂಘಟನೆಯನ್ನು ಬಲಿಷ್ಠಗೊಳಿಸುವ ಈ ಚುನಾವಣೆಗೆ ಎಲ್ಲರೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಮಾತನಾಡಿ, ‘ಪಕ್ಷದ ಎಲ್ಲ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬಹಳ ಆಸಕ್ತಿ ವಹಿಸಿ ಉತ್ಸಾಹದಿಂದ ಲೋಕಸಭೆ ಚುನಾವಣೆ ಮಾಡಿದ್ದಾರೆ. ಸಣ್ಣಪುಟ್ಟ ಸಮಸ್ಯೆ, ಭಿನ್ನಾಭಿಪ್ರಾಯ ಇದ್ದರೂ ದೇಶದ ಹಿತದಿಂದ ಅವೆಲ್ಲ ಬದಿಗೊತ್ತಿ ಕೆಲಸ ಮಾಡಿದ್ದಾರೆ. ಮತ್ತೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಮತದಾರರು ಕಾಂಗ್ರೆಸ್ ನವರ ಹಣಬಲವನ್ನು ತಿರಸ್ಕರಿಸಿದ್ದಾರೆ. ನಮ್ಮ ಅಭ್ಯರ್ಥಿ ಭಗವಂತ ಖೂಬಾ ಹ್ಯಾಟ್ರಿಕ್ ಬಾರಿಸಲಿದ್ದಾರೆ. ಎರಡ್ಮೂರು ತಿಂಗಳು ಪಕ್ಷದ ಕೆಲಸದಲ್ಲಿ ಪೂರ್ಣಾವಧಿ ತೊಡಗಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದರು.

ಈಶಾನ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆಗಾಗಿ ಪಕ್ಷ ನನಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದೇನೆ. 2012ರಲ್ಲಿ ಟಿಕೆಟ್ ಕೊಟ್ಟಾಗ ಪದವೀಧರರು 4,800 ಮತಗಳ ಅಂತರದಿಂದ ಗೆಲ್ಲಿಸಿದ್ದರು. ಎಲ್ಲರ ನಿರೀಕ್ಷೆಯಂತೆ ಈ ಭಾಗದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. 2018ರಲ್ಲಿ ನನಗೆ ಟಿಕೆಟ್ ನೀಡಲಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ. ಈಗ ಮತ್ತೆ ಟಿಕೆಟ್ ನೀಡಿದ್ದಾರೆ. ಈ ಭಾಗದ ಪ್ರಗತಿಗೆ ಅವಿರತ ದುಡಿಯುವ ಸಂಕಲ್ಪ ಮಾಡಿದ್ದೇನೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಅತ್ಯಂತ ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಪಕ್ಷದ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ. ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲುವುದು ಖಚಿತ ಎಂಬುದು ಕ್ಷೇತ್ರವಾರು ಪ್ರಮುಖರು ನೀಡಿದ ಮಾಹಿತಿಯಿಂದ ಗೊತ್ತಾಗಿದೆ’ ಎಂದರು.

ಪಕ್ಷದ ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ ಢೋಣಿ, ವಿಭಾಗ ಸಹ ಉಸ್ತುವಾರಿ ಈಶ್ವರ ಸಿಂಗ್ ಠಾಕೂರ್, ಪ್ರಮುಖರಾದ ಶಿವಾನಂದ ಮಂಠಾಳಕರ್, ಶಿವರಾಜ ಗಂದಗೆ, ರೌಫೋದ್ದಿನ್ ಕಚೇರಿವಾಲೆ, ಅರಹಂತ ಸಾವಳೆ, ರಾಜಶೇಖರ ನಾಗಮೂರ್ತಿ, ಪೀರಪ್ಪ ಔರಾದೆ, ಕಿರಣ ಪಾಟೀಲ ಹಕ್ಯಾಳ್, ಮಾಧವ ಹಸೂರೆ ಇತರರಿದ್ದರು.

ಚುನಾವಣೆ ನಿರ್ವಹಣಾ ಸಮಿತಿ ರಚನೆ

ಬೀದರ್‌: ಜೂನ್ 3ರಂದು ನಡೆಯಲಿರುವ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಬೀದರ್‌ ಜಿಲ್ಲಾ ಬಿಜೆಪಿ ಚುನಾವಣೆ ನಿರ್ವಹಣಾ ವಿವಿಧ ಸಮಿತಿಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ರಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಹ ಉಸ್ತುವಾರಿ ಜಿಲ್ಲಾ ಪ್ರಭಾರಿ ವಿಧಾನಸಭ ಕ್ಷೇತ್ರ ಉಸ್ತುವಾರಿ ಮತದಾನ ಕೇಂದ್ರದ ಸ್ಥಳ ಪ್ರಭಾರಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT