ಬಸವಕಲ್ಯಾಣ: ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ನಡೆದ ಬಜೆಟ್ ಮಂಡನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ಸದಸ್ಯರು, ಅಧಿಕಾರಿಗಳು ಬಜೆಟ್ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕಾರಣವನ್ನು ಮುಂದೆ ಮಾಡಿ ಸಭೆ ಮುಂದೂಡಲು ಆಗ್ರಹಿಸಿ ಹೊರ ಹೋದರು. ಸಭಾಂಗಣದಿಂದ ಹೊರ ಬಂದ ಸದಸ್ಯರಲ್ಲಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರೇ ಅಧಿಕವಾಗಿದ್ದರು.
ಒಟ್ಟು ₹39 ಕೋಟಿ ವೆಚ್ಚದ ಬಜೆಟ್ ಹಾಗೂ ₹97 ಲಕ್ಷ ಉಳಿತಾಯ ಬಜೆಟ್ ಮಂಡನೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು. ಅಧ್ಯಕ್ಷೆ ನಾಹೇದಾ ಸುಲ್ತಾನಾ, ಉಪಾಧ್ಯಕ್ಷೆ ಮೀನಾ ಗೋಡಬೋಲೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ ಹಜಾರಿ ಒಳಗೊಂಡು ಎಲ್ಲ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಕೆಲಕಾಲ ಚರ್ಚೆಯೂ ನಡೆಸಿದರು.
ಬಜೆಟ್ ಸಿದ್ಧಪಡಿಸುವಾಗ ಸದಸ್ಯರಿಗೆ ಈ ಬಗ್ಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ. ಅಲ್ಲದೆ ಹಿಂದಿನ ವರ್ಷದ ವೆಚ್ಚದ ಬಗ್ಗೆ ಕೆಲ ಸಂಶಯಗಳಿದ್ದು ಇದಕ್ಕೆ ಉತ್ತರ ದೊರಕುವವರೆಗೆ ಸಭೆ ಮುಂದೂಡಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು.
ಹಿಂದೆ ನಡೆದ ಸಾಮಾನ್ಯ ಸಭೆಯ ನಡವಳಿಕೆಗಳನ್ನು ಸರಿಯಾಗಿ ದಾಖಲಿಸಲಾಗಿಲ್ಲ. ಸದಸ್ಯರು ಹೇಳಿದ ಸಮಸ್ಯೆಗಳು ಬಗೆಹರಿದಿಲ್ಲ. ಮಾಜಿ ಶಾಸಕ ಬಿ.ನಾರಾಯಣರಾವ್ ಅವರ ಪ್ರತಿಮೆ ಸ್ಥಾಪನೆಯ ನಿರ್ಣಯ ತೆಗೆದುಕೊಳ್ಳಲು ಎರಡು ಸಲ ಆಗ್ರಹಿಸಲಾಗಿತ್ತು. ಈ ವಿಷಯ ಸಭೆಯ ನಡವಳಿಕೆಯಲ್ಲಿ ದಾಖಲಾಗಿಲ್ಲ ಎಂದೂ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕೆಲ ಸದಸ್ಯರು ಸಭೆಯಿಂದ ಹೊರಬಂದರು. ಅವರಲ್ಲಿ ಒಬ್ಬರಾದ ಗಫೂರ ಪೇಶಮಾಮ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಟ್ಟು 12 ಜನ ಸದಸ್ಯರು ಸಭೆ ಮುದೂಡಲು ಆಗ್ರಹಿಸಿ ಸಭೆಯಿಂದ ಹೊರಬಂದಿದ್ದೇವೆ’ ಎಂದು ತಿಳಿಸಿದರು.
‘ಬಜೆಟ್ ಮಂಡನಾ ಸಭೆ ಮುಂದೂ ಡಲು ಬರುವುದಿಲ್ಲ. ಆದರೂ, ಸದಸ್ಯರ ಆಗ್ರಹದ ಮೇರೆಗೆ ಈ ನಿರ್ಣಯ ತೆಗೆದುಕೊಳ್ಳಲಾಯಿತು’ ಎಂದು ಪೌರಾಯುಕ್ತ ಶಿವಕುಮಾರ ತಿಳಿಸಿದ್ದಾರೆ.