ಚಿಟಗುಪ್ಪ: ‘ಕೊವೀಡ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸುತ್ತಿರುವುದು ಅವೈಜ್ಞಾನಿಕ ಕ್ರಮ. ಗ್ರಾಮೀಣ, ಬಡ ಪಾಲಕರ ಮಕ್ಕಳಿಗೆ ಹಲವು ತೊಡಕುಗಳು ಉಂಟಾಗುತ್ತಿವೆ. ಮುಖ್ಯವಾಗಿ ಆರ್ಥಿಕ ಸಮಸ್ಯೆ ಎದುರಾಗುತ್ತಿದೆ’ ಎಂದು ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಚನಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಉಡಬಾಳ ಗ್ರಾಮದಲ್ಲಿ ಈಚೆಗೆ ಮೊಬೈಲ್ ಸಲುವಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧನ ಸಹಾಯ ಮಾಡಿ ಮಾತನಾಡಿದರು.
‘ಗ್ರಾಮೀಣ ಭಾಗದ ಪಾಲಕರಿಗೆ ಆ್ಯಂಡ್ರಾಯ್ಡ್ ಮೊಬೈಲ್ ಖರೀದಿಸುವ ಶಕ್ತಿ ಇಲ್ಲದಿರುವುದರಿಂದ ಅವರ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ತರಗತಿಗಳಲ್ಲಿಯೇ ಬಹುತೇಕ ವಿಷಯಗಳ ಪಾಠಗಳು ಬೇಗ ಅರ್ಥವಾಗುವುದು ಕಷ್ಟವಾಗುತ್ತದೆ ಇಂಥ ಪರಿಸ್ಥಿತಿಯಲ್ಲಿ ಆನ್ಲೈನ್ ಮೂಲಕ ತಿಳಿದುಕೊಳ್ಳುವುದು ತುಂಬ ಕಷ್ಟಕರ ಸಂಗತಿ. ಖಾಸಗಿ ಅನುದಾನ ರಹಿತ ಶಾಲೆಗಳ ಮಕ್ಕಳ ವಿಷಯದಲ್ಲಿ ಸರ್ಕಾರ ಯಾವುದೇ ಚಿಂತನೆ ಮಾಡುತ್ತಿಲ್ಲ. ಇದು ಪಾಲಕರಲ್ಲಿ ಅಸಮಾಧಾನ ಉಂಟು ಮಾಡಿದೆ. ಎಲ್ಲ ಮಕ್ಕಳ ಭವಿಷ್ಯದ ಬಗ್ಗೆ ಸಮಗ್ರ ಚಿಂತನೆ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ’ ಎಂದು ನುಡಿದರು.
ಮುಖಂಡ ಲೊಕೇಶ್ ಕನಶೆಟ್ಟಿ ಮಾತನಾಡಿ,‘ಮಾಜಿ ಶಾಸಕ ಅಶೋಕ ಖೇಣಿ ಅವರ ಆದೇಶದಂತೆ ವಿದ್ಯಾರ್ಥಿನಿಯ ಕುಟುಂಬದ ಸದಸ್ಯರಿಗೆ ಧನ ಸಹಾಯ ಮಾಡಲಾಗಿದೆ. ಶಿಕ್ಷಣ ಸಚಿವರಿಗೆ ಆನ್ಲೈನ್ ಶಿಕ್ಷಣದ ದುಷ್ಪರಿಣಾಮಗಳ ಕುರಿತು ವಿವರಿಸಿ ಪತ್ರ ಬರೆಯಲಾಗುತ್ತದೆ’ ಎಂದು ಹೇಳಿದರು.
ಗಣ್ಯರಾದ ರಾಮಶೆಟ್ಟಿ ಪಾಟೀಲ್, ಸಿರಂಗ್, ತೀರ್ಥಯ್ಯ ಸ್ವಾಮಿ, ಮಸ್ತಾನ್, ಕೃಷ್ಣ ಮೂರ್ತಿ, ಭೀಮಶಟ್ಟಿ ಗೊಪಾ, ರಾಘವೇಂದ್ರ ಉಡಬಾಳ್, ಮನೋಹರ್ ಉಡಬಾಳ್ ಹಾಗೂ ಮಾರ್ಟಿನ್ ಇದ್ದರು.