ಬಸವಕಲ್ಯಾಣ: ‘ತಾಲ್ಲೂಕಿನಲ್ಲಿ ಸೋಮವಾರ ನಡೆದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಅಂದಾಜು 6,000 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆಯಿತು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಧನ್ನೂರ (ಕೆ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ಶರಣು ಸಲಗರ ಅಭಿಯಾನಕ್ಕೆ ಚಾಲನೆ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರವೀಣ ಹೂಗಾರ, ಆರೋಗ್ಯ ಕಾರ್ಯಕರ್ತರು, ಗ್ರಾಮ ಪಂಚಾಯಿತಿಯವರು ಉಪಸ್ಥಿತರಿದ್ದರು.
ಬಸವಕಲ್ಯಾಣ ನಗರದ 17ನೇ ವಾರ್ಡ್ನಲ್ಲಿ ನಡೆದ ಉಚಿತ ಲಸಿಕೆ ನೀಡಿಕೆ ಅಭಿಯಾನದಲ್ಲೂ ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು. ತಹಶೀಲ್ದಾರ್ ಸಾವಿತ್ರಿ ಸಲಗರ, ನಗರಸಭೆ ಸದಸ್ಯೆ ಶಾಹಿದಾ ಬಾನು, ಪೌರಾಯುಕ್ತ ಶಿವಕುಮಾರ, ಮುಜಾಹಿದಪಾಶಾ ಕುರೇಶಿ ಪಾಲ್ಗೊಂಡಿದ್ದರು.
ಮೈಸಲಗಾ: ತಾಲ್ಲೂಕಿನ ಮೈಸಲಗಾದಲ್ಲಿ ನಡೆದ ಕೋವಿಡ್ ಲಸಿಕಾ ಅಭಿಯಾನದಲ್ಲಿ 180 ಜನರಿಗೆ ಲಸಿಕೆ ನೀಡಲಾಯಿತು.
ವೈದ್ಯ ಡಾ.ರಾಚಣ್ಣ ಪಾಟೀಲ, ಮುಖ್ಯಶಿಕ್ಷಕ ರವಿ ಪವಾರ, ಬಿ.ಎಲ್.ಒ ಗಳಾದ ಶಿವಪ್ಪ ಪಾಟೀಲ, ಅಶೋಕ ಶಿಂಧೆ, ನಿವೃತ್ತ ಮುಖ್ಯಶಿಕ್ಷಕ ಬಸವಣ್ಣಪ್ಪ ನೆಲ್ಲಗಿ, ರೇಣುಕಾ, ಸುನಿಲ ಚೆಂಗಟೆ, ಅಂಗನವಾಡಿ ಕಾರ್ಯಕರ್ತೆಯರಾದ ಝಾಲಾಬಾಯಿ, ಅನಿತಾ ಪಾಲ್ಗೊಂಡಿದ್ದರು.