ಹುಮನಾಬಾದ್: ‘ಸರ್ಕಾರದಿಂದ ಉಚಿತವಾಗಿ ಕೋವಿಡ್ ಲಸಿಕೆ ನೀಡುತ್ತಿದ್ದರೂ ಲಸಿಕೆ ಪಡೆಯದೆ ಇರುವುದು ತಪ್ಪು.ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸರಸ್ವತಿ ದೇವಿ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಗತ್ತಿನಾದ್ಯಂತ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಲಸಿಕೆ ದೊರೆಯುತ್ತಿಲ್ಲ. ಇಲ್ಲಿ ಉಚಿತವಾಗಿ ನೀಡಿ ಮನೆ ಬಾಗಿಲಿಗೆ ಬಂದರೂ ನಿರಾಕರಿಸುವುದು ಸರಿಯಲ್ಲ. ಸೋಂಕು ಹರಡುವಿಕೆ ತಡೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು’ ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಮಾತನಾಡಿ, ‘ಇಲ್ಲಿಯ ಬಾರ್ ಕೌನ್ಸಿಲ್ ವಕೀಲರಿಗೆ ಮತ್ತು ಕಾರಾಗೃಹದ ಕೈದಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ’ ಎಂದು ತಿಳಿಸಿದರು.
‘45 ವರ್ಷ ಮೇಲ್ಪಟ್ಟವರು ಸ್ವ-ಇಚ್ಛೆಯಿಂದ ಲಸಿಕೆ ಪಡೆಯಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾದಿಂದ ಸಂಭವಿಸಬಹುದಾದ ಸಾವು ನೋವು ತಡೆಯಬಹುದು. ಲಸಿಕೆ ಸುರಕ್ಷತೆ ಬಗ್ಗೆ ಅನುಮಾನ ಬೇಡ’ ಎಂದರು.
‘ಯುವಕರು ಪ್ರತಿ ಮನೆಯ ಹಿರಿಯರನ್ನು ಕರೆದುಕೊಂಡು ಬಂದು ಲಸಿಕೆ ಹಾಕಿಸಬೇಕು’ ಎಂದು ಸಲಹೆ ನೀಡಿದರು.
ಕಾರಾಗೃಹ ಮುಖ್ಯ ಅಧೀಕ್ಷಕ ಶಿವಪುತ್ರ, ಬಾರ್ ಕೌನ್ಸಿಲ್ ಕಾರ್ಯದರ್ಶಿ ಹರೀಶ ಅಗಡಿ, ಜೈಲು ಅಧಿಕಾರಿ ಬಸವರಾಜ, ಡಾ.ರೋಹಿತ ರಘೋಜಿ, ಡಾ. ಚಿಮಕೋಡೆ, ಶರಣು, ನಾಗರಾಳೆ ಉಪಸ್ಥಿತರಿದ್ದರು.