ಬೀದರ್: ‘ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಲು ಹಿಂದೇಟು ಹಾಕಬಾರದು’ ಎಂದು ಹುಬ್ಬಳ್ಳಿಯ ಮಹಿಳಾ ಪಾಲಿಟೆಕ್ನಿಕ್ ನಿವೃತ್ತ ಪ್ರಾಚಾರ್ಯ ಜಿ.ಎಂ. ಗೋಣಿ ಸಲಹೆ ಮಾಡಿದರು.
ನಗರದ ಪಟ್ನೆ ಫಂಕ್ಷನ್ ಹಾಲ್ನಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರ ನಾಡಿನಲ್ಲಿ ಇರುವಷ್ಟು ಸಂಸ್ಕಾರಯುತ ಕುಟುಂಬಗಳು ಬೇರೆಲ್ಲೂ ಕಾಣಸಿಗುವುದಿಲ್ಲ. ಬೀದರ್ ಜಿಲ್ಲೆಯಲ್ಲಿ ಸಾಮಾಜಿಕ ಸಂಬಂಧಗಳು ಗಟ್ಟಿಯಾಗಿವೆ ಎಂದು ಹೇಳಿದರು.
ಪ್ರಸ್ತುತ ಬಹಳಷ್ಟು ಮಂದಿ ಪ್ರೀತಿ, ಪ್ರೇಮ ಮರೆಯುತ್ತಿದ್ದು, ಒಣ ಪ್ರತಿಷ್ಠೆಗಾಗಿ ಸಾಮಾಜಿಕ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ ಮಾತನಾಡಿ,
ವಿದ್ಯಾರ್ಥಿ ಜೀವನದಲ್ಲಿ ಗುರುಗಳು ನನಗೆ ಸರಿ ದಾರಿಗೆ ತಂದಿದ್ದರು. ಬದುಕಿನ ಪಾಠಗಳನ್ನು ಕಲಿಸಿದ್ದರು. ಸಿ.ಪಿ. ಕೋರ್ಸ್ನ ಕಾರಣ ನನಗೆ ಉತ್ತಮ ಬರವಣಿಗೆ ರೂಢಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ ಮಾತನಾಡಿ, ಬಾಂಧವ್ಯ ಗಟ್ಟಿಗೊಳಿಸಲು ಜಿಲ್ಲೆಯ ಹಳೆಯ ಸಿ.ಪಿ. ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಸಿರುವುದು ಉತ್ತಮ ಬೆಳವಣಿಗೆ ಎಂದರು.
ಸರ್ಕಾರಿ ಪಾಲಿಟೆಕ್ನಿಕ್ನ ಸಿ.ಪಿ. ವಿಭಾಗದ ಮುಖ್ಯಸ್ಥ ಬಕ್ಕಪ್ಪ ನಿರ್ಣಾಕರ್ ಮಾತನಾಡಿ, ಸಿ.ಪಿ. ಕೋರ್ಸ್ ಪೂರೈಸಿದವರಿಗೆ ತಕ್ಷಣ ಸರ್ಕಾರಿ ಉದ್ಯೋಗ ದೊರಕುತ್ತಿರುವ ಕಾರಣ ಸದ್ಯ ಸಿ.ಪಿ. ವಿಭಾಗಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ವರ್ಷ ಕೊರೊನಾ ನಡುವೆಯೂ ಕೋರ್ಸ್ನ ಎಲ್ಲ ಸ್ಥಾನಗಳು ಭರ್ತಿಯಾಗಿವೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಸುಗುರೆ ಮಾತನಾಡಿದರು. ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅಧಿಕಾರಿ ಅಮರೇಶ ಸಾಲಿಮಠ, ತಹಶೀಲ್ದಾರ್ರಾದ ರಮೇಶ ಪೆದ್ದೆ, ಶಾರದಾ, ಡಿಸಿಸಿ ಬ್ಯಾಂಕ್ನ ಡಿಜಿಎಂ ವಿಜಯಕುಮಾರ ಹೂಗಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಪ್ತ ಸಹಾಯಕ ಅಶೋಕ ಮಹಾಲಿಂಗ, ವಿಠ್ಠಲರಾವ್, ಕವಿತಾ ಕಮ್ಮಾರ್, ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ರಾಮರೆಡ್ಡಿ, ನ್ಯಾಯಾಂಗ ಇಲಾಖೆಯ ಸುಭಾಷ ಹುಲಸೂರೆ, ಲಕ್ಷ್ಮಣ ಕೇಸರಿ, ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಲಿಯಾಖ್ ಅಹಮ್ಮದ್, ಉಪನ್ಯಾಸಕಿ ಸುರೇಖಾ ಬಾಲಸುಬ್ರಹ್ಮಣ್ಯಂ, ವಾಣಿಜ್ಯ ತೆರಿಗೆ ನಿರೀಕ್ಷಕ ಅಶೋಕ ಶೆಂಬೆಳ್ಳೆ, ಅಬಕಾರಿ ಇಲಾಖೆಯ ಶಾಂತಾ ಪಾಟೀಲ, ಗ್ರಾಹಕರ ವ್ಯಾಜ್ಯಗಳ ಆಯೋಗದ ಸಿದ್ದಮ್ಮ ಪಾಟೀಲ ಸೇರಿದಂತೆ ಅನೇಕ ಹಳೆಯ ಸಿ.ಪಿ. ವಿದ್ಯಾರ್ಥಿಗಳು ಇದ್ದರು.
ಕಲಾವಿದ ನಾಗರಾಜ ಜೋಗಿ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.