ಬೀದರ್: ‘ಸಾಹಿತ್ಯ ಹಾಗೂ ಆಧ್ಯಾತ್ಮ ಒಂದಕ್ಕೊಂದು ಪೂರಕವಾಗಿವೆ. ಆದ್ದರಿಂದ ಮಕ್ಕಳಿಗೆ ಸಾಹಿತ್ಯ ಹಾಗೂ ಆಧ್ಯಾತ್ಮ ಒಳಗೊಂಡ ಶಿಕ್ಷಣ ನೀಡಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶೀಲಾ ಬಿರಾದಾರ ಅಭಿಪ್ರಾಯ ಪಟ್ಟರು.
ನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಕದಂಬ ಕನ್ನಡ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಹಿತ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ಆಧ್ಯಾತ್ಮ ಹಾಗೂ ಸಾಹಿತ್ಯ ಸೂರ್ಯ, ಚಂದ್ರನಿದ್ದಂತೆ. ಆಧ್ಯಾತ್ಮವನ್ನು ಅನುಭವಿಸಬೇಕು. ಸಾಹಿತ್ಯವನ್ನು ಆಸ್ವಾಧಿಸಬೇಕು’ ಎಂದರು.
‘ಅಲ್ಲಮಪ್ರಭುದೇವರು-ಆಧ್ಯಾತ್ಮ’ ಕುರಿತು ಉಪನ್ಯಾಸ ನೀಡಿದ ರೇಣುಕಾ ಎನ್.ಬಿ,‘ ಅಲ್ಲಮಪ್ರಭುದೇವರ ವಚನಗಳಲ್ಲಿ ಸಾಮಾನ್ಯ ಮನುಷ್ಯನು ಆತ್ಮಾವಲೋಕನ ಹಾಗೂ ಆತ್ಮ ವಿಕಾಸ ತತ್ವವನ್ನು ಕಾಣಬಹುದು’ ಎಂದರು.
ರೇಣುಕಾ ಮಳ್ಳಿ ವರಕವಿ ಬೇಂದ್ರೆ ಬದುಕು-ಬರಹ ವಿಷಯ ಕುರಿತು ಉಪನ್ಯಾಸ ನೀಡಿದರು. ಕದಂಬ ಕನ್ನಡ ಸಂಘದ ಅಧ್ಯಕ್ಷ ವೀರಶೆಟ್ಟಿ ಮೈಲೂರಕರ್ ಪ್ರಾಸ್ತಾವಿಕವಾಗು ಮಾತನಾಡಿದರು.
ಸಂಘದ ಗೌರವ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಬಿರಾದಾರ ವಚನ ಗಾಯನ ನಡೆಸಿಕೊಟ್ಟರು. ಬಸವ ಸ್ವರಚಿತ ಕವನ ವಾಚಿಸಿದರು. ಪ್ರೊ.ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಗಂಗಶೆಟ್ಟಿ ಪಾಟೀಲ ನಿರೂಪಿಸಿದರು. ಶಿವನಾಥ ಸ್ವಾಮಿ ವಂದಿಸಿದರು.