ಬೀದರ್: ತಾಲ್ಲೂಕಿನ ಚಿಟ್ಟಾ ಗ್ರಾಮದಲ್ಲಿ ಇರುವ ನವೀನ್ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಎರೆಹುಳು ಗೊಬ್ಬರ ತಯಾರಿಕೆ ಘಟಕವನ್ನು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್ ಉದ್ಘಾಟಿಸಿದರು.
ಉದ್ಯಾನ, ಕೈತೋಟ, ಫಲ ಪುಷ್ಪಗಳ ಸಸಿ, ಎರೆಹುಳು ಗೊಬ್ಬರ ತಯಾರಿಕೆ ಘಟಕಗಳ ಮೂಲಕ ಶಾಲೆ ಹಸಿರು ಪ್ರೀತಿ ತೋರಿದೆ ಎಂದು ಅವರು ಹೇಳಿದರು.
ಕೃಷಿ, ತೋಟಗಾರಿಕೆಗೆ ಎರೆಹುಳು ಹಾಗೂ ರಾಸಾಯನಿಕ ಮುಕ್ತ ಗೊಬ್ಬರವನ್ನೇ ಬಳಸಬೇಕು. ಭೂಮಿಯ ಫಲವತ್ತತೆ ಕಾಯ್ದುಕೊಳ್ಳಲು ಒತ್ತು ಕೊಡಬೇಕು. ಮರ ಗಿಡಗಳನ್ನು ನೆಟ್ಟು ಪರಿಸರ ಸಮತೋಲನ ಕಾಪಾಡಬೇಕು ಎಂದು ಸಲಹೆ ಮಾಡಿದರು.
ನವೀನ್ ಪಬ್ಲಿಕ್ ಶಾಲೆ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಮಾತನಾಡಿ, ಶಾಲೆಯ ಎರಡು ಎಕರೆ ಪ್ರದೇಶದಲ್ಲಿ ಉದ್ಯಾನ, ಕೈತೋಟ ನಿರ್ಮಿಸಲಾಗಿದೆ. ಮಾವು, ಬಾಳೆ, ಮೂಸಂಬಿ, ಪಪ್ಪಾಯ, ದಾಳಿಂಬೆ, ಸೇಬು, ಪೇರಲ, ಲಿಂಬೆ, ನೇರಳೆ, ಚಿಕ್ಕು, ಅಂಜೂರ, ತುಳಸಿ ಗಿಡಗಳನ್ನು ನೆಡಲಾಗಿದೆ. ಅವುಗಳಿಗೆ ಬೇಕಾಗುವ ಗೊಬ್ಬರಕ್ಕಾಗಿ ಇದೀಗ ಎರೆಹುಳು ಗೊಬ್ಬರ ತಯಾರಿಕೆ ಘಟಕ ಆರಂಭಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣದ ಜತೆ ಅವರಲ್ಲಿ ಪರಿಸರ, ನೈರ್ಮಲ್ಯ, ಆರೋಗ್ಯದ ಅರಿವನ್ನೂ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪ್ರಮುಖರಾದ ನಿತಿನ್ ಕರ್ಪೂರ, ಸಚ್ಚಿದಾನಂದ ಚಿದ್ರೆ, ಡಾ. ಲೋಕೇಶ ಹಿರೇಮಠ, ಸತೀಶ್ ಸ್ವಾಮಿ, ಶಿವಕುಮಾರ ಪಾಟೀಲ, ಶ್ರೀಕಾಂತ ಮೋದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.