ಬೀದರ್: ಕರುನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಗಿಲಾವ್ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭ ನಗರದಲ್ಲಿ ಮಂಗಳವಾರ ಸಂಜೆ ನಡೆಯಿತು.
ಎಂಜಿನಿಯರ್ ಹಾವಶೆಟ್ಟಿ ಪಾಟೀಲ ಉದ್ಘಾಟಿಸಿ, ಪ್ರತಿ ನಿರ್ಮಾಣದ ಶ್ರಮದ ಶಕ್ತಿಯಾಗಿರುವ ಕಾರ್ಮಿಕರ ಪ್ರಗತಿಗಾಗಿ ಕಾರ್ಮಿಕರಿಗೆ ಸಿಗುವ ಸರ್ಕಾರದ ಸೌಲಭ್ಯಗಳು ತಲುಪಿಸಲು ಕಾರ್ಮಿಕ ಸಂಘಟನೆಗಳ ಪಾತ್ರ ಬಹಳ ಮುಖ್ಯವಾದುದು ಎಂದರು.
ಸರ್ಕಾರದಿಂದ ಮದುವೆಗೆ ಸಿಗುವ ಧನಸಹಾಯ, ಆರೋಗ್ಯ ಕಾರ್ಡ್, ಪಿಂಚಣಿ, ವಿದ್ಯಾರ್ಥಿ ವೇತನ, ಕಾರ್ಮಿಕರ ಕಿಟ್ಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತಿದೆ. ಕಾರ್ಮಿಕರ ಮಕ್ಕಳು ಕೂಡ ಎಂಜಿನಿಯರ್, ಡಾಕ್ಟರ್, ಲಾಯರ್, ಡಿಸಿ, ಎಸಿಯಂತಹ ಉನ್ನತ ಹುದ್ದೆಗಳಿಗೆ ಹೋಗಬೇಕು. ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಇದನ್ನು ಸಾಧಿಸಬಹುದು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಬೀದರ್ ಜಿಲ್ಲಾ ಘಟಕದ ಸಂಚಾಲಕ ಶಿವಕುಮಾರ ನೀಲಿಕಟ್ಟೆ ಮಾತನಾಡಿ, ಕಾರ್ಮಿಕರಿಗೆ, ಕಾರ್ಮಿಕರ ಮಕ್ಕಳಿಗೆ, ಕಾರ್ಮಿಕರ ಕುಟುಂಬಕ್ಕೆ ಮಂಜೂರಾಗುವ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದರೆ ಹೋರಾಟ ನಡೆಸಬೇಕು ಎಂದರು.
ಮುಖಂಡ ಸ್ವಾಮಿದಾಸ ದೊಡ್ಡಿ ಮಾತನಾಡಿ, ಎಷ್ಟೇ ಕಾರ್ಮಿಕ ಸಂಘಟನೆಗಳು ಇದ್ದರೂ ಸಹ ಎಲ್ಲರೂ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಮದ್ಯವರ್ತಿಗಳಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಅದನ್ನು ತಪ್ಪಿಸಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಸಂಜುಕುಮಾರ ಸಿಂಧೆ ಮಾತನಾಡಿ, ಕಾರ್ಮಿಕರ ಕಾಯ್ದೆ ಪ್ರಕಾರ ಈ ಸಂಘವನ್ನು ನೋಂದಣಿ ಮಾಡಿಸಲಾಗಿದೆ. ಕಟ್ಟಡ ಕಾರ್ಮಿಕರು, ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಹೋಟೆಲ್ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಹೊಲಿಗೆ, ಪೇಂಟಿಂಗ್, ರಸ್ತೆ ನಿರ್ಮಾಣ, ನರೇಗಾ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಝರೆಪ್ಪ, ಶರಣಪ್ಪ ಕಿರಣಕುಮಾರ ಕಾಂಬಳೆ, ಸಂಜು ಮನ್ನಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ ಸೈನೆ, ಅನಿಲ ನೇಳಗೆ, ಲಕ್ಷ್ಮಣ ಅಯಾಸಪೂರ, ತುಕಾರಾಮ್ ಸಂಜುಕುಮಾರ ಮನ್ನಾಏಖೆಳ್ಳಿಕರ್, ಬಸವರಾಜ ಲಕ್ಷ್ಮಣ, ಸಾಹಿತಿ ಸುಬ್ಬಣ್ಣ ಕರಕನಳ್ಳಿ ಹಾಜರಿದ್ದರು. ಕಾರ್ಮಿಕ ಮುಖಂಡರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.