ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡೇತರ ನಾಮಫಲಕ ಧ್ವಂಸಗೊಳಿಸಿ ಹೋರಾಟ: ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನ

Published 5 ಮಾರ್ಚ್ 2024, 9:30 IST
Last Updated 5 ಮಾರ್ಚ್ 2024, 9:30 IST
ಅಕ್ಷರ ಗಾತ್ರ

ಬೀದರ್‌: ನಗರದ ಅಂಗಡಿ, ಮುಂಗಟ್ಟುಗಳ ಮೇಲೆ ಅಳವಡಿಸಿದ್ದ ಕನ್ನಡೇತರ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರನ್ನು ಪೊಲೀಸರು ನಗರದಲ್ಲಿ ಸೋಮವಾರ ಬಂಧಿಸಿದರು.

ನಗರದ ಮೋಹನ್‌ ಮಾರ್ಕೆಟ್‌ ಸಮೀಪದ ಭವಾನಿ ಜುವೆಲರ್ಸ್ ಸೇರಿದಂತೆ ಮೂರು ಮಳಿಗೆಗಳ ಮೇಲೆ ಇಂಗ್ಲಿಷ್‌ ನಾಮಫಲಕ ಅಳವಡಿಸಲಾಗಿತ್ತು. ಅದನ್ನು ಲಾಠಿಗಳಿಂದ ಹೊಡೆದು ರಕ್ಷಣಾ ವೇದಿಕೆಯ ಕಾರ್ಯಕರ್ತರು ಧ್ವಂಸಗೊಳಿಸಿದರು. ಇತರೆ ಅಂಗಡಿಗಳ ಮೇಲೆ ಹಾಕಿದ್ದ ಕನ್ನಡೇತರ ನಾಮಫಲಕಗಳನ್ನು ಹಾಳುಗೆಡವಲು ಮುಂದಾದರು. ಅಂಗಡಿಗಳವರ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ವೇದಿಕೆಯ ಹತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ನ್ಯೂಟೌನ್‌ ಠಾಣೆಗೆ ಕರೆದೊಯ್ದರು.

‘ಎಲ್ಲಾ ಮಳಿಗೆಗಳ ಮೇಲೆ ಶೇ 60ರಷ್ಟು ಕನ್ನಡ ಭಾಷೆಯಲ್ಲಿಯೇ ನಾಮಫಲಕಗಳನ್ನು ಅಳವಡಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರ ಗಡುವು ಕೂಡ ಮುಗಿದಿದೆ. ಅದರ ವಿರುದ್ಧ ಜಿಲ್ಲಾಡಳಿತ, ನಗರಸಭೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಇದರ ವಿರುದ್ಧ ಜಾಗೃತಿ ಜಾಥಾ ಕೂಡ ನಡೆಸಲಾಗಿತ್ತು. ಆದರೆ, ಮಳಿಗೆಗಳವರು ಅದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಹಾಗಾಗಿ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುವ ಕೆಲಸ ಮಾಡಿದ್ದೇವೆ’ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದರು.

ಕನ್ನಡೇತರ ನಾಮಫಲಕಗಳ ತೆರವಿಗೆ ಸಂಬಂಧಿಸಿದ ಸಮಿತಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಅಧ್ಯಕ್ಷರಾಗಿ ನೇಮಿಸಬೇಕು. ಆಗ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಬಹುದು ಎಂದು ಹೇಳಿದರು.

ವೇದಿಕೆಯ ರಾಜ್ಯ ಕಾರ್ಯದರ್ಶಿ ಜಗದೀಶ ಬಿರಾದಾರ, ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್‌ ಸಜ್ಜನ್‌, ತಾಲ್ಲೂಕು ಅಧ್ಯಕ್ಷ ಸಚಿನ್‌ ಬೆನಕನಳ್ಳಿ, ಔರಾದ್‌ ತಾಲ್ಲೂಕು ಅಧ್ಯಕ್ಷ ಅನಿಲ್‌ ಹೇಡೆ, ವೀರಶೆಟ್ಟಿ ಗೌಸಪೂರೆ, ಉದಯಕುಮಾರ ಅಷ್ಟೂರೆ, ವಿವೇಕ ನಿರ್ಮಳೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT