ಚಿಟಗುಪ್ಪ: ತಾಲ್ಲೂಕಿನ ಭವಾನಿ ನಗರ ತಾಂಡಾದಲ್ಲಿ ಅಳವಡಿಸಲಾದ ಶುದ್ಧ ನೀರಿನ ಘಟಕ ಹಾಳಾಗಿದೆ.
ಮುತ್ತಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ತಾಂಡಾದಲ್ಲಿ ಆರು ವರ್ಷಗಳ ಹಿಂದೆ ನಿರ್ಮಿಸಲಾದ ಶುದ್ಧ ನೀರಿನ ಘಟಕ ಸದ್ಬಳಕೆಯಾಗದೆ ಸಂಪೂರ್ಣವಾಗಿ ಪಾಳು ಬಿದ್ದಿದೆ.
ಯಂತ್ರಗಳು ತುಕ್ಕು ಹಿಡಿದಿವೆ. ಕಿಟಕಿಯ ಗಾಜು ಒಡೆದಿದೆ. ನೆಲಹಾಸು ಕಿತ್ತು ಹೋಗಿದೆ.
ತಾಂಡಾದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬ ಉದ್ದೇಶದಿಂದ ಹಿಂದಿನ ಶಾಸಕ ಅಶೋಕ ಖೇಣಿ ಅವರ ಅವಧಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿತ್ತು. ₹2.25 ಲಕ್ಷ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಶೆಡ್ ನಿರ್ಮಿಸಲಾಗಿದೆ.
‘ಘಟಕದ ಕಾರ್ಯ ಪೂರ್ಣಗೊಳಿಸಿ ಹೋದ ಅಧಿಕಾರಿಗಳು ಇಷ್ಟು ವರ್ಷವಾದರೂ ಮರಳಿ ಬಂದಿಲ್ಲ. ಶುದ್ಧ ಕುಡಿಯುವ ನೀರು ಲಭಿಸಿಲ್ಲ’ ಎಂದು ತಾಂಡಾದ ನಿವಾಸಿ ರಾಮು ರಾಠೋಡ ತಿಳಿಸಿದ್ದಾರೆ.
‘ಶುದ್ಧ ನೀರಿನ ಘಟಕ ಅಳವಡಿಸಿದ ನಂತರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸದಿರುವುದರಿಂದ ಸಮಸ್ಯೆಯಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪ್ರಭು ಮಜಕೂರಿ ಹೇಳಿದರು.