ಚಾಮರಾಜನಗರ: ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ.ಗೌರಿ ಗಣೇಶನ ಹಬ್ಬದ ನಂತರ ವಾರದಿಂದ ವಾರಕ್ಕೆ ಬೆಲೆ ಕುಸಿಯುತ್ತಾ ಬಂದಿದೆ.
ಕಳೆದ ವಾರ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ₹500–₹600ರಷ್ಟಿದ್ದ ಕೆಜಿ ಕನಕಾಂಬರದ ಬೆಲೆ ಈ ವಾರ ₹200ಕ್ಕೆ ಇಳಿದಿದೆ.
ಮಲ್ಲಿಗೆ ಬೆಲೆ ₹200ಕ್ಕೆ ಕುಸಿದಿದೆ. ₹160 ಇದ್ದ ಕಾಕಡದ ಬೆಲೆ ₹40–₹50ಕ್ಕೆ ಇಳಿಕೆಯಾಗಿದೆ. ಚೆಂಡು ಹೂವು ಕೆಜಿಗೆ ₹5ರಿಂದ ₹10 ಇದೆ.
‘ಪಿತೃಪಕ್ಷದ ಕಾರಣದಿಂದ ಹೂವುಗಳಿಗೆ ಬೇಡಿಕೆ ಇಲ್ಲ. ಹಾಗಾಗಿ, ಬೆಲೆ ಕಡಿಮೆಯಾಗಿದೆ. ದಸರಾ ವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಬಿಡಿಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತರಕಾರಿ ಮಾರುಕಟ್ಟೆಯಲ್ಲಿ ಕಾಯಿ ಪಲ್ಲೆಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಹಾಪ್ಕಾಮ್ಸ್ನಲ್ಲಿ ಟೊಮೆಟೊ (₹30–₹35), ಕ್ಯಾರೆಟ್ (₹30), ಬೀನ್ಸ್ (₹60), ಈರುಳ್ಳಿ (₹25) ಸೇರಿದಂತೆ ಎಲ್ಲ ತರಕಾರಿಗಳ ಬೆಲೆ ಕಳೆದ ವಾರದಷ್ಟೇ ಇದೆ.
ಹಣ್ಣುಗಳ ಧಾರಣೆಯಲ್ಲೂ ಯಥಾಸ್ಥಿತಿ ಮುಂದುವರಿದೆ.
‘ಎರಡು ವಾರಗಳಿಂದ ತರಕಾರಿ ಹಾಗೂ ಹಣ್ಣುಗಳ ಬೆಲೆ ಸ್ಥಿರವಾಗಿದೆ. ಇನ್ನೂ ಕೆಲವು ದಿನ ಇದೇ ದರಗಳು ಮುಂದುವರಿಯುವ ಸಾಧ್ಯತೆ ಇದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಹೇಳಿದರು.
ಮಾಂಸ ಮಾರುಕಟ್ಟೆಯಲ್ಲಿ ಚಿಕನ್ ಬೆಲೆಯಲ್ಲಿ ₹10ರಿಂದ ₹30ರಷ್ಟು ಹೆಚ್ಚಾಗಿದೆ.