ಚಾಮರಾಜನಗರ: ಹಿಜಾಬ್, ಹಲಾಲ್, ಆಜಾನ್ ವಿವಾದಗಳ ನಡುವೆಯೇ ಇಡೀ ಸಮಾಜಕ್ಕೆ ಮಾದರಿಯಾಗುವ, ಕೋಮು ಸೌಹಾರ್ದದತೆಗೆ ಸಾಕ್ಷಿಯೊಂದು ತಾಲ್ಲೂಕಿನ ಚಿಕ್ಕಹೊಳೆಯಲ್ಲಿದೆ.
ಮುಸ್ಲಿಂ ವ್ಯಕ್ತಿಯೊಬ್ಬರು ಗಣೇಶನಿಗೆ ಗುಡಿ ನಿರ್ಮಿಸಿ, ಅರ್ಚಕರನ್ನು ನೇಮಿಸಿ ಗಣಪತಿಯನ್ನು ಆರಾಧಿಸುತ್ತಾ ಬಂದಿದ್ದಾರೆ.
ನೀರಾವರಿ ಇಲಾಖೆಯ ನಿವೃತ್ತ ನೌಕರ ಹಾಗೂ ಸದ್ಯ ಚಿಕ್ಕಹೊಳೆ, ಸುವರ್ಣಾವತಿ ಜಲಾಶಯಗಳ ಗೇಟ್ ಆಪರೇಟರ್ ಆಗಿ ದುಡಿಯುತ್ತಿರುವ ಪಿ.ರೆಹಮಾನ್ ಅವರು ನಾಲ್ಕು ವರ್ಷಗಳ ಹಿಂದೆಯೇ ಚಿಕ್ಕಹೊಳೆ ಜಲಾಶಯದ ಸಮೀಪ ಗಣಪತಿಗೆ ಗುಡಿ ನಿರ್ಮಿಸಿದ್ದಾರೆ.
ಅರ್ಚಕರನ್ನು ನೇಮಿಸಿರುವ ಅವರು, ಪ್ರತಿ ತಿಂಗಳು ವೇತನವನ್ನೂ ಕೊಡುತ್ತಿದ್ದಾರೆ. ಪ್ರತಿ ಸೋಮವಾರ ಹಾಗೂ ಶುಕ್ರವಾರ ಗುಡಿಯಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ. ಗ್ರಾಮಸ್ಥರೂ ಇದರಲ್ಲಿ ಭಾಗಿಯಾಗುತ್ತಾರೆ.
ರೆಹಮಾನ್ ಅವರು 2018ರಲ್ಲಿ ನಿವೃತ್ತರಾಗಿದ್ದಾರೆ. ನಿವೃತ್ತಿಯಾಗುವ ಕೆಲವು ತಿಂಗಳುಗಳ ಹಿಂದೆ ಚಿಕ್ಕಹೊಳೆ ಜಲಾಶಯದ ಪಕ್ಕದ ಉದ್ಯಾನದಲ್ಲಿದ್ದ ಗಣಪತಿ ವಿಗ್ರಹ ಕಳ್ಳತನವಾಗಿತ್ತು. ಇದರಿಂದ ಅವರು ಬೇಸರಗೊಂಡಿದ್ದರು. ಕನಸಿನಲ್ಲಿ ಬಂದ ಗಣೇಶ, ತನಗೊಂದು ಗುಡಿಕಟ್ಟಿಸು ಎಂದು ಹೇಳಿದ್ದೇ ಗುಡಿ ನಿರ್ಮಾಣಕ್ಕೆ ಪ್ರೇರಣೆ ಎಂದು ಹೇಳುತ್ತಾರೆ ಅವರು.
‘ನಮಗೆ ಅಲ್ಲಾಹ್ ಇದ್ದ ಹಾಗೆ ಹಿಂದೂಗಳಿಗೆ ಈಶ್ವರ. ಎಲ್ಲರಲ್ಲೂ ಹರಿಯುತ್ತಿರುವುದು ಕೆಂಪು ಬಣ್ಣದ ರಕ್ತ. ದೇವರೂ ಒಬ್ಬನೇ ಎಂದು ವಿನಾಯಕನನ್ನು ಪೂಜಿಸುತ್ತಾ ಬಂದಿದ್ದೇನೆ. ನನಗೆ ಒಳ್ಳೆಯದಾಗಿದೆ’ ಎಂದು ರೆಹಮಾನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.