ರೈತರಿಗೆ ಗೊತ್ತಿಲ್ಲ ಅಧಿಕಾರಿಗಳು ಹೇಳುತ್ತಿಲ್ಲ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿರುವ ಬಗ್ಗೆ ರೈತರಿಗೆ ಹೆಚ್ಚು ಮಾಹಿತಿ ಇಲ್ಲ. ಸ್ವಯಂ ಪ್ರೇರಿತರಾಗಿ ಮಣ್ಣು ಪರೀಕ್ಷೆ ಮಾಡಲು ಅವರು ಮುಂದಾಗುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳೂ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಇಲಾಖೆ ನೀಡಿರುವ ಗುರಿಯನ್ನು ಅಧಿಕಾರಿಗಳು ಸಾಧಿಸುತ್ತಿದ್ದಾರೆ. ಆದರೆ ಪರೀಕ್ಷೆಯ ನಂತರ ಏನೂ ಕೆಲಸ ಆಗುತ್ತಿಲ್ಲ. ಸರ್ಕಾರ ರಾಸಾಯನಿಕ ಗೊಬ್ಬರಕ್ಕೆ ಸಬ್ಸಿಡಿ ಕೊಡುತ್ತಿದೆ. ಆದರೆ ಭೂಮಿ ಉಳಿಸುವ ನಿಟ್ಟಿನಲ್ಲಿ ಸಾವಯವ ಕೃಷಿ ಮಾಡುವ ರೈತರಿಗೆ ಏನೂ ಕೊಡುತ್ತಿಲ್ಲ. ಮಣ್ಣು ಉಳಿಯಬೇಕೆಂದರೆ ರಾಸಾಯನಿಕ ಬಳಸಬಾರದು.–ಹೊನ್ನೂರು ಪ್ರಕಾಶ್ ಸಾವಯವ ಕೃಷಿಕ
ಆಗಾಗ ಪರೀಕ್ಷೆ ಮಾಡಿಸುತ್ತೇನೆ ಎರಡು ವರ್ಷಗಳ ಹಿಂದೆ ಮಣ್ಣಿನ ಪರೀಕ್ಷೆ ಮಾಡಿಸಿದ್ದೆ. ಬಾಳೆ ನಡುವೆ ಕಲ್ಲಂಗಡಿ ಬೆಳೆದಿದ್ದೆ. ಕಲ್ಲಂಗಡಿ ಚೆನ್ನಾಗಿ ಬರಲಿಲ್ಲ. ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ವಿಚಾರಿಸಿದಾಗ ಮಣ್ಣಿನ ಪರೀಕ್ಷೆ ಮಾಡಲು ಸಲಹೆ ಕೊಟ್ಟರು. ಅದಕ್ಕಾಗಿ ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಮಣ್ಣಿನ ಮಾದರಿ ಕೊಟ್ಟಿದ್ದೇನೆ. ವರದಿ ಬಂದ ನಂತರ ಅಧಿಕಾರಿಗಳು ತಜ್ಞರ ಸಲಹೆ ಆಧಾರಿಸಿ ಮಣ್ಣಿಗೆ ಪೋಷಕಾಂಶ ನೀಡುವೆ.–ಕೆಂಪರಾಜು ಬೆಳವಾಡಿ ಗುಂಡ್ಲುಪೇಟೆ ತಾಲ್ಲೂಕು
ಮಣ್ಣಿನ ಮಾದರಿ ಸಂಗ್ರಹ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ವಿವಿಧ ಕೃಷಿ ಭೂಮಿಯಲ್ಲಿ ಕೃಷಿ ಇಲಾಖೆ ಮಣ್ಣು ಸಂಗ್ರಹಿಸುತ್ತದೆ. ಆದರೆ ಮಣ್ಣಿನ ಗುಣಮಟ್ಟ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ತಿಳಿಸುವುದಿಲ್ಲ. ಹೀಗಾಗಿ ಕಾಫಿ ಮತ್ತು ಹಣ್ಣಿನ ಬೆಳೆಗಾರರು ಅವರಿಗೆ ಇಷ್ಟ ಬಂದ ಗೊಬ್ಬರಗಳನ್ನು ಬಳಸಿಕೊಂಡು ಕೈಗೊಳ್ಳುತ್ತಾರೆ.-ನಾಗೇಂದ್ರ ಬಿಳಿಗಿರಿರಂಗನ ಬೆಟ್ಟ
ಮಾಹಿತಿ ಇಲ್ಲ ಪ್ರತಿ ವರ್ಷ ಮುಂಗಾರು ಹಿಂಗಾರು ಹಂಗಾಮಿನಲ್ಲಿ ಮಳೆ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದೇವೆ. ಇಳುವರಿಯಲ್ಲಿ ಲಾಭ ಮತ್ತು ನಷ್ಟವಾಗುತ್ತಿದೆ. ನಮ್ಮ ಜಮೀನಿಗೆ ಮಣ್ಣು ಪರೀಕ್ಷೆ ಮಾಡಿಸಿಲ್ಲ. ಕೃಷಿ ಇಲಾಖೆಯವರು ಇದರ ಬಗ್ಗೆ ನಮಗೆ ಮಾಹಿತಿಯನ್ನು ಕೊಟ್ಟಿಲ್ಲ.–ಶಿವನಂಜಯ್ಯ.
ಹೆಗ್ಗವಾಡಿ ಮಣ್ಣು ಪರೀಕ್ಷೆ ನಡೆಯುತ್ತಿಲ್ಲ ಯಳಂದೂರು ತಾಲ್ಲೂಕಿನಲ್ಲಿ ಕೃಷಿಕರಿಗೆ ಮಣ್ಣು ಪರೀಕ್ಷೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲವೊಮ್ಮೆ ಅಧಿಕಾರಿಗಳು ಮಣ್ಣು ಪರೀಕ್ಷೆ ಮಾಡಲು ಸಲಹೆ ನೀಡುತ್ತಾರೆ. ನಂತರ ಮಣ್ಣನ್ನು ಯಾವ ರೀತಿ ಸಂಗ್ರಹಿಸಬೇಕು ಎಂಬ ಮಾಹಿತಿಯನ್ನು ನೀಡುವುದಿಲ್ಲ. ಪರೀಕ್ಷೆ ನಂತರ ಮಣ್ಣಿನ ಭೌತಿಕ ರಚನೆ ಅಥವಾ ರಾಸಾಯನಿಕ ಗುಣದ ಬಗ್ಗೆ ತಿಳಿಸುವುದು ಇಲ್ಲ. ಹೀಗಾಗಿ ಬಹಳಷ್ಟು ಬೇಸಾಯಗಾರರು ಮಣ್ಣು ಪರೀಕ್ಷೆಗೆ ಹೆಚ್ಚಿನ ಒತ್ತು ನೀಡುವುದಿಲ್ಲ.–ಆರ್.ನಾಗರಾಜು ಕೆಸ್ತೂರು
ಕಾರ್ಯಗತವಾಗದ ಯೋಜನೆ ಸರ್ಕಾರ ಮಣ್ಣು ಪರೀಕ್ಷೆ ಮಾಡಿಸಿ ಎಂದು ಹೇಳುತ್ತದೆ ನಿಜ ಆದರೆ ಸರ್ಕಾರದ ಯಾವ ಕೆಲಸವೂ ಕಾರ್ಯಗತವಾಗುವುದಿಲ್ಲ. ಹೆಸರಿಗೆ ಮಾತ್ರ ಯೋಜನೆಗಳು. ನಮ್ಮ ಭಾಗದಲ್ಲಿ ಮಣ್ಣು ಪರೀಕ್ಷೆ ಯಾರೂ ಮಾಡಿಲ್ಲ. ಕಾಟಾಚಾರಕ್ಕೆ ಒಂದಿಬ್ಬರ ಜಮೀನಿನಲ್ಲಿ ಮಣ್ಣು ಪರೀಕ್ಷೆ ಮಾಡಿಸಿದ್ದಾರೆ. ರೈತರು ತಮಗೆ ಇಷ್ಟ ಬಂದ ಹಾಗೆ ಕೃಷಿ ಮಾಡುತ್ತಿದ್ದಾರೆ.–ಗೌಡೇಗೌಡ ಕೊಳ್ಳೇಗಾಲದ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.