ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರ | ರಾಸುಗಳಿಗೆ ಮೂಗುದಾರ: ರೈತನ ಉಚಿತ ಸೇವೆ

ಹೊನ್ನೂರು ರಾಜಪ್ಪಗೆ ಒಲಿದ ಮೂಗುದಾರ ಚುಚ್ಚುವ ಕಲೆ
Last Updated 21 ನವೆಂಬರ್ 2020, 13:30 IST
ಅಕ್ಷರ ಗಾತ್ರ

ಯಳಂದೂರು: ಜಾನುವಾರುಗಳನ್ನು ನಿಯಂತ್ರಿಸಲು ಮೂಗುದಾರ ಹಾಕುವ ಕ್ರಮ ಗ್ರಾಮೀಣ ಭಾಗದಲ್ಲಿದೆ. ಮೂಗುದಾರ ಹಾಕುವುದೂ ಒಂದು ಕಲೆ. ಎಲ್ಲರಿಗೂ ಅದು ಸಿದ್ದಿಸುವುದಿಲ್ಲ. ಮೊದಲೆಲ್ಲ ಗ್ರಾಮಗಳಲ್ಲಿ ಹಲವರು ಇದರಲ್ಲಿ ಪರಿಣತಿ ಸಾಧಿಸಿದ್ದರು. ಈಗೀಗ ರೈತರು ಈ ಕೆಲಸಕ್ಕೆ ಪಶು ವೈದ್ಯರನ್ನೇ ಅವಲಂಬಿಸಿದ್ದಾರೆ.

ಆದರೆ, ತಾಲ್ಲೂಕಿನ ಹೊನ್ನೂರು ಗ್ರಾಮದ ಹಿರಿಯ ರೈತ ರಾಜಪ್ಪ ಅವರು ದನಕರುಗಳೀಗೆ ಮೂಗುದಾರ ತೊಡಿಸುವುದರಲ್ಲಿ ಪಳಗಿದ್ದಾರೆ. ಈ ಕೆಲಸಕ್ಕೆ ಅವರು ಹಣ ಪಡೆಯುವುದಿಲ್ಲ. ವಂಶ ಪಾರಂಪರ್ಯವಾಗಿ ಬಳುವಳಿಯಾಗಿ ಬಂದ ಈ ಕೌಶಲವನ್ನು ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಾರೆ. ಸುತ್ತಮುತ್ತಲ ಗ್ರಾಮಗಳ ಹಸು, ಎತ್ತುಗಳ ಮಾಲೀಕರು ಮುಂಜಾನೆಯಿಂದಲೇ ಇವರ ಮುಂದೆ ರಾಸುಗಳ ಸಮೇತ ನೆರೆಯುತ್ತಾರೆ.

‘ಎತ್ತು, ಎಮ್ಮೆ, ಹಸು ಹಾಗೂ ಕರುಗಳಿಗೆ ಮೂಗುದಾರ ಹಾಕುವ ಕಲೆ ಅವುಗಳ ಮಾಲೀಕರಿಗೆ ಗೊತ್ತಿರುವುದಿಲ್ಲ. ಮೂಗುದಾರ ತೊಡಿಸುವುದು ಸುಲಭದ ಕೆಲಸವೂ ಅಲ್ಲ. ರಾಸನ್ನು ಹಗ್ಗದಿಂದ ಕಟ್ಟಿ ನೆಲಕ್ಕೆ ಉರುಳಿಸಬೇಕು. ಹಾಗೆ ಮಾಡುವಾಗ ಗಾಯ ಆಗದಂತೆ, ಮೂಳೆಮುರಿಯದಂತೆ ಎಚ್ಚರ ವಹಿಸಬೇಕು. ಮೂಗು ಚುಚ್ಚುವಾಗಲೂ ಸರಿಯಾದ ಜಾಗ ನೋಡಿಚುಚ್ಚಬೇಕು. ಚಿಗುರಿನಲ್ಲಿ ಚುಚ್ಚಿದರೆ ರಾಸುಗಳಿಗೆ ಹೆಚ್ಚು ನೋವು ಆಗುತ್ತದೆ’ ಎಂದು ತಮ್ಮ ಅನುಭವವನ್ನು ಬಿಚ್ಚಿಡುತ್ತಾರೆ ರಾಜಪ್ಪ ಅವರು.

‘ಮೊದಲೆಲ್ಲಮೂಗುದಾರವನ್ನು ರೈತರು ಬಿಳಿ ಕತ್ತಾಳೆ ನಾರಿನಿಂದ ತಾವೇಹೆಣೆಯುತ್ತಿದ್ದರು. ಈಗ ಮಾರುಕಟ್ಟೆಯಲ್ಲಿ ನೂಲು ಹಾಗೂ ಪ್ಲಾಸ್ಟಿಕ್‌ ಮೂಗುದಾರಸಿಗುತ್ತದೆ. ನಯವಾದ ಹಾಗೂ ಮೃದುವಾದ ಪ್ಲಾಸ್ಟಿಕ್ ದಾರಗಳೂ ಬಂದಿವೆ.ಪ್ರಾಣಿಯ ವಯಸ್ಸಿಗೆ ಅನುಗುಣವಾದ ಗಾತ್ರದ ಮೂಗುದಾರ ಹುಡುಕಿ ಹಾಕಬೇಕು. ಸಣ್ಣ ಇಲ್ಲವೆದಪ್ಪ ಆದರೆ ಮೂಗು ಕೊಯ್ಯುತ್ತದೆ. ದಾರ ಹಾಕುವ ವ್ಯಕ್ತಿಗೆ ಇದರ ಪರಿಜ್ಞಾನ ಇರಬೇಕು’ ಎಂದು ಹೇಳುತ್ತಾರೆ ಅವರು.

‘ರಾಜಪ್ಪ ಅವರ ತಾತ‌ ಮತ್ತು ತಂದೆ ಮೂಗುದಾರ ಹಾಕುವಲ್ಲಿ ಪರಿಣಿತಿ ಪಡೆದಿದ್ದರು. ಮೂಗುಚುಚ್ಚವಾಗ ನಂಜಾಗಬಾರದು. ಲೋಹದ ದಬ್ಬಣ ಬಳಸುವಾಗ ಎಚ್ಚರ ಇರಬೇಕು. ಕೆಲವೊಮ್ಮೆ ಬಲಿತಕಾಡು ಗಿಡದ ಕಡ್ಡಿ ಚೂಪು ಮಾಡಿ ಮೂಗು ಚುಚ್ಚುತ್ತಾರೆ. ಈಗ ಇಂತಹ ಗ್ರಾಮೀಣ ಕುಶಲಕಲೆ ತಿಳಿದಿರುವ ಮಂದಿ ಕಡಿಮೆಯಾಗುತ್ತಿದ್ದಾರೆ’ ಎಂದು ಅಂಬಳೆಯ ಕೃಷಿಕ ಶಿವಶಂಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಪ್ಪ ಅವರ ಈ ಸೇವೆ ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ಸುತ್ತಮುತ್ತಲತಾಲ್ಲೂಕಿನ ಹಳ್ಳಿಗರು ಕರೆದು ಮೂಗುದಾರ ಹಾಕಿಸುತ್ತಾರೆ. ನೂರಾರುದನಕರುಗಳಿಗೆ ಮೂಗುದಾರ ಹಾಕಿ ಅವರು ರೈತರಿಗೆ ನೆರವಾಗಿದ್ದಾರೆ.

‘ಮೂಗುದಾರ ಹಾಕುವುದು ನಮ್ಮ ಮನೆತನದ ಹೆಮ್ಮೆ. ಬಹುಶಃ ಇದುನನ್ನೊಂದಿಗೆ ಕೊನೆಗೊಳ್ಳಲಿದೆ. ನಮ್ಮ ಸಂಬಂಧಿಕರ ಮಕ್ಕಳು ಓದಿಕೊಂಡಿದ್ದಾರೆ. ಅವರು ಈಕೆಲಸ ಬಗ್ಗೆ ಆಸಕ್ತಿ ತೋರುತ್ತಿಲ್ಲ’ ಎಂದು ರಾಜಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT