ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿ ಬಿಳಿಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವುದು ಖಚಿತವಾಗಿದೆ.
ಮಣ್ಣು ಬಂಡೆಗಳ ಅಡಿಯಲ್ಲಿ ಎರಡು ಶವ ಸಿಲುಕಿರುವುದನ್ನು ಎನ್ ಡಿಆರ್ ಎಫ್, ಎಸ್ ಡಿಆರ್ ಎಅಫ್ ಸಿಬ್ಬಂದಿ ಖಚಿತಪಡಿಸಿದ್ದಾರೆ. ಇಬ್ಬರ ದೇಹ ನಜ್ಜು ಗುಜ್ಜಾಗಿರುವ ಹಿಟಾಚಿಗಳಲ್ಲಿ ಸಿಲುಕಿಕೊಂಡಿರುವುದನ್ನು ಗುರುತಿಸಿದ್ದಾರೆ. ಒಂದು ಹಿಟಾಚಿಯಿಂದ ಶವವನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ.
ಉತ್ತರ ಪ್ರದೇಶದ ಗೋರಖ್ ಪುರದ ಹಜೀಂ ಉಲ್ಲ (24), ಮಿರಾಜ್ (28) ಹಾಗೂ ಸರ್ಫ್ ರಾಜ್ (18) ಅವರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಜೀಂ ಉಲ್ಲಾ ಹಾಗೂ ಮಿರಾಜ್ ಅವರು ಹಿಟಾಚಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಸರ್ಫರಾಜ್ ಅವರು ಸಹಾಯಕರಾಗಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಬೆಳಿಗ್ಗೆ 6.30ಗೆ ಕಾರ್ಯಾಚರಣೆ ಆರಂಭವಾಗಿದೆ. ಎನ್ ಡಿಆರ್ ಎಫ್ ನ 20, ಎಸ್ ಡಿಆರ್ ಎಫ್ ನ 20 ಹಾಗೂ ಅಗ್ನಿಶಾಮಕ ದಳದ 15 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.