ಹನೂರು (ಚಾಮರಾಜನಗರ): ಕೋವಿಡ್ ಕಾರಣದಿಂದ ಕುಸಿದಿದ್ದ ಇಲ್ಲಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಆದಾಯ ಈಗ ಚೇತರಿಸಿಕೊಳ್ಳುತ್ತಿದ್ದು, 54 ದಿನಗಳ ಅವಧಿಯಲ್ಲಿ ₹2.21 ಕೋಟಿ ಹುಂಡಿ ಕಾಣಿಕೆ ಸಂಗ್ರಹವಾಗಿದೆ.
ಗುರುವಾರ ದೇವಾಲಯದಲ್ಲಿ ತಡ ರಾತ್ರಿವರೆಗೆ ಹುಂಡಿ ಎಣಿಕೆ ನಡೆದಿದ್ದು, 40 ಗ್ರಾಂ ಚಿನ್ನ, 1.65 ಕೆಜಿ ಬೆಳ್ಳಿಯನ್ನೂ ಭಕ್ತರು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ಈ ಮೊದಲು, ಸೆಪ್ಟೆಂಬರ್ 18ರಂದು ಹುಂಡಿ ಎಣಿಕೆ ನಡೆದಿತ್ತು.
ಕೋವಿಡ್ ಕಾರಣದಿಂದ ನವೆಂಬರ್ 1 ರವರೆಗೂ ಬೆಟ್ಟದಲ್ಲಿ ವಾಸ್ತವ್ಯಕ್ಕೆ, ಮುಡಿ ಸೇವೆ ಹಾಗೂ ಇತರ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ನ.1ರ ನಂತರ ಭಕ್ತರಿಗೆ ಮುಡಿಸೇವೆ, ಚಿನ್ನದ ತೇರಿನ ಸೇವೆ ಸೇರಿದಂತೆ ಹಲವು ಸೇವೆಗಳನ್ನು ಮಾಡಲು ಅನುಕೂಲ ಕಲ್ಪಿಸಲಾಗಿದೆ.