ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಹುಲಿಯ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಕೆರೆಯಲ್ಲಿ ದನಗಳಿಗೆ ನೀರು ಕುಡಿಸಲು ರೈತರೊಬ್ಬರು ಹೋಗಿದ್ದಾಗ ಮೃತದೇಹ ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಗಮಿಸಿ ಹುಲಿಯ ಮೃತದೇಹವನ್ನು ಹೊರ ತೆಗೆದರು.
ಹುಲಿಯ ಕಳೇಬರ ಕೊಳೆತಿದ್ದು, ಎರಡು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ. ಗಂಡು ಹುಲಿಯೇ ಅಥವಾ ಹೆಣ್ಣೇ ಎಂಬುದು ಗೊತ್ತಾಗಿಲ್ಲ. ಸಾವಿನ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ನಂತರವಷ್ಟೇ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ದಿನಗಳಿಂದ ಹುಲಿಯೊಂದು ಈ ಭಾಗದ ಜಮೀನಿನಲ್ಲಿ ಹುಲಿ ಕಾಣಿಸಿಕೊಳ್ಳುತ್ತಿತ್ತು. ಮೃತಪಟ್ಟಿರುವುದು ಅದೇ ಹುಲಿಯೇ ಎಂಬುದು ಗೊತ್ತಾಗಿಲ್ಲ.
ಹುಲಿಯ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಮೃತ ಹುಲಿ ವೀಕ್ಷಣೆಗೆ ಬಂದ ಅರಣ್ಯಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.
‘ಚಿರತೆ, ಹುಲಿಗಳು ಜಾನುವಾರುಗಳ ಮೇಲೆ ದಾಳಿ ಮಾಡಿದಾಗ ದೂರು ನೀಡಿದರು ಸ್ಪಂದಿಸದ ಅಧಿಕಾರಿಗಳು’ ಹುಲಿ ಸತ್ತಿದೆ ಎಂದು ಗೊತ್ತಾದ ತಕ್ಷಣವೇ ಬಂದಿದ್ದೀರಿ. ಜನರ ಮತ್ತು ಸಾಕು ಪ್ರಾಣಿಗಳಿಗೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದರು.