ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.20ರಿಂದ ವೀರಶೈವ ಲಿಂಗಾಯತ ಜಾಗತಿಕ ವ್ಯವಹಾರ ಶೃಂಗಸಭೆ

ಅಂತರರಾಷ್ಟ್ರೀಯ ಲಿಂಗಾಯತ ಯೂತ್ ವೇದಿಕೆಯ ದಶಮಾನೋತ್ಸವ; ಬೆಂಗಳೂರಿನಲ್ಲಿ ಆಯೋಜನೆ
Last Updated 25 ನವೆಂಬರ್ 2022, 16:01 IST
ಅಕ್ಷರ ಗಾತ್ರ

ಚಾಮರಾಜನಗರ: ಅಂತರರಾಷ್ಟ್ರೀಯ ಲಿಂಗಾಯತ ಯೂತ್ ವೇದಿಕೆಯು (ಐಎಲ್‌ವೈಎಫ್) 2023ರ ಜನವರಿ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ಮೂರು ದಿನಗಳ ‘ವೀರಶೈವ ಲಿಂಗಾಯತ ಜಾಗತಿಕ ವ್ಯವಹಾರ ಶೃಂಗಸಭೆ–2023’ ಹಮ್ಮಿಕೊಂಡಿದೆ.

ವೇದಿಕೆಯ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಶೃಂಗಸಭೆಯ ಬಗ್ಗೆ ವಿವರಗಳನ್ನು ನೀಡಿದರು.

ಐಎಲ್‌ವೈಎಫ್‌ನ ಮೈಸೂರು ವಿಭಾಗದ ಸಂಸ್ಥಾಪಕ ಅಧ್ಯಕ್ಷ ಲೋಕೇಶ್‌ ಟಿ.ಎಸ್‌ ಮಾತನಾಡಿ, ‘ವೀರಶೈವ ಲಿಂಗಾಯತರವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಒಟ್ಟು ಗೂಡಿಸುವ ಉದ್ದೇಶದಿಂದ2013ರಲ್ಲಿ ಈ ಸಂಸ್ಥೆ ಆರಂಭವಾಗಿತ್ತು. ಸಂಸ್ಥೆಗೆ ಈಗ 10 ವರ್ಷ ತುಂಬಿದೆ. ದಶಮಾನೋತ್ಸವದ ಅಂಗವಾಗಿ ಸಮಾಜದ ಉದ್ದಿಮೆದಾರರ ಶೃಂಗಸಭೆ ಆಯೋಜಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ವೈಟ್‌ ಪೆಟಲ್ಸ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಜನವರಿ 20ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಉದ್ಘಾಟಿಸಲಿದ್ದಾರೆ’ ಎಂದರು.

‘ಐಎಲ್‌ವೈಎಫ್‌ನಲ್ಲಿ 1,500 ಸದಸ್ಯರಿದ್ದು, ಅವರಿಗೆ ತಮ್ಮ ಉದ್ಯಮ ಹಾಗೂ ಅದರ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ಇದೆ. 50 ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಚಾಮರಾಜನಗರ–ಮೈಸೂರು ಭಾಗದಲ್ಲಿ ಉದ್ದಿಮೆ ನಡೆಸುತ್ತಿರುವ ಸಮಾಜದವರು ಕೂಡ ಮಳಿಗೆಗಳನ್ನು ತೆರೆಯಬಹುದು’ ಎಂದು ಹೇಳಿದರು.

ವೇದಿಕೆಯ ಸಂಸ್ಥಾಪಕ ಅವಿನಾಶ್‌ ಪಾಳೇಗಾರ್‌ ಮಾತನಾಡಿ, ‘ಮೂರು ದಿನ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರ, ತಯಾರಿಕಾ ಕ್ಷೇತ್ರ, ನವೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕ ವಲಯಗಳು ಇರಲಿವೆ. ಉದ್ಯೋಗ ಮೇಳ, ಉದ್ದಿಮೆಗೆ ಸಂಬಂಧಿಸಿದಂತೆ ಉಪನ್ಯಾಸ, ಕಾರ್ಯಾಗಾರಗಳು ನಡೆಯಲಿವೆ. ಮಳಿಗೆಗಳನ್ನು ತೆರೆಯುವವರಿಗೆ ನಿಗದಿತ ಶುಲ್ಕ ನಿಗದಿಪಡಿಸಲಾಗಿದ್ದು, ಶೃಂಗಸಭೆಯಲ್ಲಿ ಭಾಗವಹಿಸುವಿಕೆ ಸಂಪೂರ್ಣ ಉಚಿತ. ಎಲ್ಲ ವರ್ಗ ಜಾತಿಯ ಯುವಕ ಯುವತಿಯರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಶೃಂಗಸಭೆಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ’ ಎಂದರು.

‘ಮಹಾರಾಷ್ಟ್ರದ ವೀರಶೈವ ಇಂಟರ್‌ನ್ಯಾಷನಲ್ ಅಸೋಸಿಯೇಷನ್ (ವಿಐಎ), ಉತ್ತರ ಅಮೆರಿಕದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ನ್ಯೂಜಿಲೆಂಡ್‌ನ ಬಸವ ಸಮಿತಿಯು ಈ ಶೃಂಗಸಭೆಗೆ ಬೆಂಬಲ ನೀಡಿದೆ’ ಎಂದರು.

ಐಎಲ್‌ಐಎಫ್‌ ಸಂಸ್ಥಾಪಕರಾದ ಸಿದ್ದರಾಮ ಜತ್ತಿ, ಟ್ರಸ್ಟಿ ಬಿ.ಎಸ್.ಪ್ರಶಾಂತ್, ಮೈಸೂರು ವಿಭಾಗದ ಅಧ್ಯಕ್ಷ ವಿರೇಶ್, ಉಪಾಧ್ಯಕ್ಷ ಮಹೇಶ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ದಯಾನಿಧಿ ಇದ್ದರು.

ಶೃಂಗಸಭೆಯ ಉದ್ದೇಶ

‘ಜಗತ್ತಿನಾದ್ಯಂತ ಇರುವ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು ಒಂದೇ ಸೂರಿನಡಿ ತರುವುದು ಮತ್ತು ಕರ್ನಾಟಕದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸುವುದು. ಕರ್ನಾಟಕ ಸರ್ಕಾರವು ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ವ್ಯಾಪಾರ,ರೈತ ಸಮುದಾಯವನ್ನು ಉತ್ತೇಜಿಸುವುದು. ಜಿಲ್ಲಾ ಮಟ್ಟದಲ್ಲಿ ನವೋದ್ಯಮ ಘಟಕವನ್ನು ಬಲಪಡಿಸುವುದು ಮತ್ತು ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದು. ಕರ್ನಾಟಕದಾದ್ಯಂತ ರೈತ ಸಮುದಾಯವನ್ನು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಕೃಷಿ ಪರಿಹಾರಗಳನ್ನು ಅನ್ವೇಷಿಸುವುದು ಈ ಶೃಂಗಸಭೆಯ ಉದ್ದೇಶ’ ಎಂದು ಅವಿನಾಶ್‌ ಪಾಳೇಗಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT