ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಬಡ ಭಗಿನಿಯರ ಸ್ಫೂರ್ತಿ ಲಲಿತಾ

Published 8 ಮಾರ್ಚ್ 2024, 7:16 IST
Last Updated 8 ಮಾರ್ಚ್ 2024, 7:16 IST
ಅಕ್ಷರ ಗಾತ್ರ

ಯಳಂದೂರು: ಸಕಲಕೆಲ್ಲಕೆ ನೀನೇ ಅಕಳಂಕ ಗುರು... ಎಂಬ ಮುಪ್ಪಿನ ಷಡಕ್ಷರ ದೇವರ ಭಾವ ರೂಪಕಗಳ ಸೊಗಸಿನಂತೆ ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ಲಲಿತಾ ದೊರೆಸ್ವಾಮಿ, ಅನಕ್ಷರಸ್ಥ ಸ್ತ್ರೀಯರ ಪಾಲಿಗೂ ಕಾಯಕದ ಮಹತ್ವ ತಿಳಿಸಿಕೊಡುವ ಮಾತಿಗೆ ಕಟ್ಟು ಬಿದ್ದವರು.

ತಾಲೂಕಿನ ಗೌಡಹಳ್ಳಿ ಗ್ರಾಮದ ಲಲಿತ ಹತ್ತನೇ ತರಗತಿ ಕಲಿತಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ. ಆ ಮೂಲಕ ಗ್ರಾಮ ಅಭಿವೃದ್ಧಿ, ಮಹಿಳಾ ಸಬಲೀಕರಣ, ಅಬಲೆಯರಿಗೆ ತರಬೇತಿ ಹಾಗೂ ಸತ್ಸಂಗ ಏರ್ಪಡಿಸುವ ಮೂಲಕ ವೃತ್ತಿ ಮತ್ತು ಮೌಲ್ಯಗಳನ್ನು ಒಟ್ಟೊಟ್ಟಿಗೆ ಬೆಸೆದ ಅಪರೂಪದ ಮಹಿಳೆ.

ಗೌಡಹಳ್ಳಿ ಸುತ್ತಮುತ್ತಲ ಗ್ರಾಮ ಹಾಗೂ ಪುರಾಣಿ ಪೋಡಿನ ಸೋಲಿಗರ ಸಮುದಾಯದ ಯುವತಿ ಮಂಡಲಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಟೈಲರಿಂಗ್, ಗೃಹೋಪಯೋಗಿ ವಸ್ತುಗಳ ತರಬೇತಿ, ವ್ಯಕ್ತಿತ್ವ ವಿಕಾಸದ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಸ್ಫೂರ್ತಿ ತುಂಬುತ್ತಾರೆ ಲಲಿತಾ.

‘ಬಹಳಷ್ಟು ಕುಟುಂಬಗಳಲ್ಲಿ ಒಬ್ಬರ ಮೇಲೆ ಅವಲಂಬನೆಯಾಗಿ ಹಲವಾರು ಜನರು ದುಡಿಯುದನ್ನೇ ಮರೆತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಮಹಿಳೆಯರು ಸಣ್ಣಪುಟ್ಟ ಉದ್ಯೋಗಗಳನ್ನು ಅವಲಂಬಿಸಿದರೆ ಒಂದಷ್ಟು ಆದಾಯ ಕೈ ಸೇರುತ್ತದೆ. ಮನೆಯಲ್ಲಿ ಕುಳಿತು ದೇಹ ಮತ್ತು ಮನಸ್ಸು ಜಡಗಟ್ಟುವುದು ತಪ್ಪುತ್ತದೆ. ಆರ್ಥಿಕ ಸದೃಢತೆಯು ಸಾಧ್ಯವಾಗುತ್ತದೆ. ಸಾಲದ ನೆರವು, ಆಸಕ್ತಿ ಕ್ಷೇತ್ರಗಳಲ್ಲಿ ತೊಡಗುವುದು ಹಾಗೂ ಸಣ್ಣಪುಟ್ಟ ಕ್ಷೇತ್ರಗಳಲ್ಲಿ ತೊಡಗುವುದನ್ನು ಪರಿಚಯ ಮಾಡಿಸುವ ಕೆಲಸದಲ್ಲಿ ಆಪ್ತ ಸಲಹೆ ನೆರವು ಒದಗಿಸುತ್ತೇನೆ’ ಎಂದು ಹೇಳುತ್ತಾರೆ ಅವರು.

‘ನಾನು ಜನ ಸೇವೆಯಲ್ಲಿ ತೊಡಗಲು ಜೆಎಸ್ಎಸ್ ಸಂಸ್ಥೆಯ ಸ್ಫೂರ್ತಿ ಕಾರಣ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಮುನ್ನೋಟ, ತಾಲ್ಲೂಕು ಕದಳಿ ಮಹಿಳಾ ವೇದಿಕೆಯ ಸಾಂಸ್ಕೃತಿಕ ವೈವಿಧ್ಯತೆ, ಮುಪ್ಪಿನ ಷಡಕ್ಷರಿ ಸೌಹಾರ್ದ ಸೇವಾ ಸಂಘದ ನಿರ್ದೇಶಕರಾಗಿ ನೂರಾರು ಚಿಂತಕರ ಆಶಯ ತಿಳಿಯುವ ಅವಕಾಶ ಕಟ್ಟಿಕೊಟ್ಟವು. ಮುಂದೆ ಮಹಿಳಾ ಮತ್ತು ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶಗಳು ತಾನಾಗಿ ಒದಗಿ ಬಂದಿತು’ ಎಂದು ಹೇಳುತ್ತಾರೆ ಲಲಿತಾ.

ಸಂಘ ಸಂಸ್ಥೆಗಳ ಸುಮಾರು 500ಕ್ಕೂ ಹೆಚ್ಚಿನ ಯುವತಿಯರಿಗೆ ಮಾರ್ಗದರ್ಶಕಿಯಾಗಿರುವ ಲಲಿತಾ, ಸಾಲ ಸೌಲಭ್ಯ, ಡಿಜಿಟಲ್ ಬ್ಯಾಂಕಿಂಗ್, ಶ್ರದ್ದಾ ಕೇಂದ್ರಗಳ ಸಂರಕ್ಷಣೆ ಸ್ವಚ್ಛತೆ ನೈರ್ಮಲ್ಯ, ಬಾಲ್ಯ ವಿವಾಹ ಜಾಗೃತಿ, ಸಹಾಯಕ್ಕಾಗಿ ಯಾಚಿಸುವ ಪ್ರತಿಯೊಬ್ಬರ ಬಳಿಯು ತೆರಳಿ ಆಪ್ತ ಸಲಹೆ, ಮತ್ತು ಪ್ರೋತ್ಸಾಹ ನೀಡುತ್ತಾ ಇತರರಿಗೂ ಮಾದರಿಯಾಗಿದ್ದಾರೆ.  

ಲಲಿತಾ ದೊರೆಸ್ವಾಮಿ
ಲಲಿತಾ ದೊರೆಸ್ವಾಮಿ
ಸಂಘ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ನಮ್ಮ ಕುಟುಂಬದವರು ನೆರವಾಗುತ್ತಾರೆ. ನನ್ನ ಸೇವಾ ಕೈಂಕರ್ಯದಲ್ಲಿ ನೆರೆ ಹೊರೆಯವರ ಪಾಲು ಹೆಚ್ಚಿದೆ.
- ಲಲಿತಾ ದೊರೆಸ್ವಾಮಿ ಸಮಾಜ ಸೇವಕಿ

Quote

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT