ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಯಲಹಂಕ ನಡುವಿನ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣವಾಗಿದೆ. ಶನಿವಾರ ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಮಾರ್ಗದಲ್ಲಿ ಪರೀಕ್ಷಾರ್ಥರೈಲು ಸಂಚಾರಕ್ಕೆ ಚಾಲನೆ ನೀಡಿದರು.
ಯಲಹಂಕದಿಂದ ಚಿಕ್ಕಬಳ್ಳಾಪುರಕ್ಕೆ ವಿದ್ಯುತ್ ರೈಲಿನಲ್ಲಿ ಅಧಿಕಾರಿಗಳು ಬಂದರು.
ರೈಲ್ವೆ ಇಲಾಖೆಯ ಮುಖ್ಯ ಸುರಕ್ಷಾ ಅಧಿಕಾರಿಗಳಾದ ಅಭಯ್ ಕುಮಾರ್ ರಾಯ್, ಶ್ಯಾಮ್ ಸಿಂಗ್ ಹಾಗೂ ರೈಲ್ವೆ ಅಧಿಕಾರಿಗಳು ಚಿಕ್ಕಬಳ್ಳಾಪುರಕ್ಕೆ ಬಂದರು. ಚಿಕ್ಕಬಳ್ಳಾಪುರ ನಿಲ್ದಾಣದಲ್ಲಿ ರೈಲಿಗೆ ಪೂಜೆ ಸಲ್ಲಿಸಿದರು.
ಚಿಕ್ಕಬಳ್ಳಾಪುರ–ಯಲಹಂಕ ಮಾರ್ಗದ ವಿದ್ಯುದ್ದೀಕರಣ ಪೂರ್ಣವಾಗಿದೆ. ಏನಾದರೂ ಸಮಸ್ಯೆಗಳು ಇವೆಯೇ ಎನ್ನುವ ಬಗ್ಗೆ ತಿಳಿಯಲು ಪರೀಕ್ಷಾರ್ಥ ರೈಲನ್ನು ಓಡಿಸಲಾಗಿದೆ. ನಿಗದಿತ ದಿನ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ಈ ವೇಳೆ ಮಾತನಾಡಿದ ರೈಲ್ವೆ ಹೋರಾಟ ಸಮಿತಿ ಕಾರ್ಯದರ್ಶಿ ಸೈಯದ್ ಮಹಮ್ಮದ್,ಯಲಹಂಕದಿಂದ ಚಿಕ್ಕಬಳ್ಳಾಪುರದವರೆಗಿನ ಕಾಮಗಾರಿ ಪೂರ್ಣವಾಗಿದೆ. ಚಿಕ್ಕಬಳ್ಳಾಪುರದಿಂದ ಬಂಗಾರಪೇಟೆ ನಡುವಿನ ವಿದ್ಯುತ್ ಮಾರ್ಗದ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು ಎಂದು ಹೇಳಿದರು.
ಗುವಾಹಟಿ, ತಿರುಪತಿ ಸೇರಿದಂತೆ ಬೇರೆ ಬೇರೆ ಕಡೆಗಳಿಗೂ ಇಲ್ಲಿಂದ ರೈಲು ಸಂಪರ್ಕ ಕಲ್ಪಿಸಬೇಕು. ಪುಟ್ಟಪರ್ತಿ ಮತ್ತು ಗೌರಿಬಿದನೂರು ರೈಲ್ವೆ ಮಾರ್ಗದ ಕಾಮಗಾರಿಯೂ ಆದಷ್ಟು ಬೇಗ ಪೂರ್ಣವಾಗಬೇಕು ಎಂದು ಹೇಳಿದರು.
ರೈಲ್ವೆ ಹೋರಾಟ ಸಮಿತಿಯನಳಿನಾಕ್ಷಿ, ಆರ್. ವೆಂಕಟಾಚಲ, ಮುನಿಕೃಷ್ಣಪ್ಪ, ಲೋಕೇಶ್ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.