ಶಿಡ್ಲಘಟ್ಟ: ತಾಲ್ಲೂಕಿನ ಚೆನ್ನಹಳ್ಳಿಯಲ್ಲಿ ರವಿಕುಮಾರ್ ಅವರ ಕೃಷಿಹೊಂಡದಲ್ಲಿ ಬಿದ್ದಿದ್ದ ದೊಡ್ಡಗಾತ್ರದ ನಾಗರಹಾವನ್ನು ಸೋಮವಾರ ಕೊತ್ತನೂರಿನ ಸ್ನೇಕ್ ನಾಗರಾಜ್ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು.
ಹೊಂಡದಲ್ಲಿ ಕಳೆದ ಎರಡು ದಿನಗಳ ಹಿಂದೆ ಬಿದ್ದಿತ್ತು. ಹೊಂಡದಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ಹರಿದಾಡುತ್ತಿತ್ತು. ಖಾಲಿ ಚೀಲವನ್ನು ಇಳಿಬಿಟ್ಟು ಹಾವನ್ನು ಅದರಲ್ಲಿ ಹೋಗುವಂತೆ ಮಾಡಲು ತುಂಬಾ ಪ್ರಯತ್ನಿಸಿದರೂ ಆಗಲಿಲ್ಲ. ನಾಗರಹಾವು ವಿಷಪೂರಿತವಾದ್ದರಿಂದ ಅದನ್ನು ಹಿಡಿಯಲು ಆಗದೇ ಕೊನೆಗೆ ಕೊತ್ತನೂರಿನ ಸ್ನೇಕ್ ನಾಗರಾಜ್ ಅವರನ್ನು ಕರೆಸಿದೆವು.
ಅವರು ನೀರಿನ ಹೊಂಡಕ್ಕೆ ಏಣಿ ಹಾಕಿಕೊಂಡು ಸರಾಗವಾಗಿ ಇಳಿದರು. ಬುಸುಗುಡುತ್ತಾ ಹಾವು ಕಚ್ಚಲು ಬರುತ್ತಿತ್ತು. ಆದರೆ ನಾಗರಾಜ್ ಚಾಕಚಕ್ಯತೆಯಿಂದ ಬಾಲವನ್ನು ಹಿಡಿದು ಮೇಲೆತ್ತಿ, ಕಚ್ಚಲು ಬಂದರೂ ತಪ್ಪಿಸಿಕೊಂಡು ಏಣಿ ಏರಿ ಹೊರಬಂದರು ಎಂದು ಚೆನ್ನಹಳ್ಳಿ ರವಿಕುಮಾರ್ ತಿಳಿಸಿದರು.
ಭಾರತದ ನಾಲ್ಕು ವಿಷಕಾರಿ ಹಾವುಗಳಲ್ಲಿ ಇದು ಸಹ ಒಂದು. ಕಚ್ಚಿದ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಕೂಡಲೇ ವ್ಯಕ್ತಿಯು ಮೃತಪಡುವರು. ಈ ಹಾವಿನ ಬಗ್ಗೆ ಎಲ್ಲರಿಗೂ ಭೀತಿಯಿದೆ ಎಂದು ಎಂದು ಸ್ನೇಕ್ ನಾಗರಾಜ್ ಮಾಹಿತಿ ನೀಡಿದರು.
ವ್ಯವಸಾಯ ಪ್ರದೇಶದ ಬಳಿ ಅದರ ಆಹಾರವಾದ ಇಲಿಗಳಿಗಾಗಿ ನಾಗರಹಾವು ಸುಳಿಯುವಾಗ ತಿಳಿಯದೇ ಕೃಷಿ ಹೊಂಡಕ್ಕೆ ಬಿದ್ದಿದೆ. ಮೇಲೆ ಹತ್ತಿ ಹೋಗಲಾಗದೇ ಅದು ತೊಳಲಾಡುತ್ತಿತ್ತು. ಹಾಗಾಗಿ ರಕ್ಷಣೆ ಮಾಡಿದೆ. ಹಾವು ಆತ್ಮರಕ್ಷಣೆಗಾಗಿ ಕಚ್ಚಬಲ್ಲದೇ ಹೊರತು ದ್ವೇಷಗುಣಗಳು ಇಲ್ಲ ಎಂದು ಹೇಳಿದರು.