ಬಾಗೇಪಲ್ಲಿ: ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ ರಸ್ತೆ 44ರ ಗ್ರೀನ್ ಪಾರ್ಕ್ನ ಬಳಿ ಕಸದ ರಾಶಿ ಎದ್ದು ಕಾಣುತ್ತದೆ. ಈ ಕಸದ ರಾಶಿಯತ್ತ ಕಣ್ಣಾಡಿಸಿದರೆ ಇದು ಅನಾಥರ ವಿಶ್ರಾಂತಿಯ ತಾಣ ಎನಿಸಿದೆ.
ಆಂಧ್ರಪ್ರದೇಶದ ಗಡಿ, ಗೂಳೂರು ರಸ್ತೆ, ಚಿಂತಾಮಣಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ನೂರಾರು ಮಂದಿ ಅನಾಥರು ರಸ್ತೆಗಳಲ್ಲಿ, ಕಸದ ರಾಶಿಗಳಲ್ಲಿ, ಗಿಡ ಮರಗಳ ಪೊದೆಗಳಲ್ಲಿ ಮಲಗಿರುವರು.
ದಾರಿಹೋಕರಿಂದ ತಿಂಡಿ ತಿನಿಸು ಪಡೆದು ಸೇವಿಸುವ ದೃಶ್ಯಗಳು ಕಾಣಿಸುತ್ತಿವೆ. ಅನಾಥರ, ನಿರ್ಗತಿಕರು, ಹಿರಿಯ ಜೀವಿಗಳ ಈ ಸ್ಥಿತಿ ಸಹೃದಯಿಗಳಿಗೆ ಕಣ್ಣೀರು ತರಿಸುತ್ತದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತದೆ.
ಪಟ್ಟಣದ ಹೊರವಲಯದ ಗ್ರೀನ್ ಪಾರ್ಕ್ ಪ್ಯಾಮಿಲಿ ಡಾಬಾ ಮುಂದೆ ಕಸದ ರಾಶಿಯಲ್ಲಿ, ತಿಂಡಿತಿನಿಸುಗಳ ತ್ಯಾಜ್ಯಗಳು, ಪೊಟ್ಟಣಗಳು, ಕಸ, ಕಡ್ಡಿಗಳನ್ನು ಹಾಕಲಾಗಿದೆ. ಈ ಕಸದ ರಾಶಿಯಲ್ಲಿ ಅನಾಥರು ತಮಗೆ ಪರಿವೇ ಇಲ್ಲದಂತೆ ವಿಶ್ರಾಂತಿ ಪಡೆಯುತ್ತಾರೆ.
ನಾರೇಪಲ್ಲಿ ಗ್ರಾಮದ ಬಳಿಯ ಟೋಲ್ ಮುಂದಿನ ರಸ್ತೆ ತಿರುವಿನ ಮಧ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಹಗಲು-ಇರುಳು ವಾಸವಾಗಿದ್ದಾರೆ.
ಅನಾಥರ ನಿರ್ಗತಿಕರಿಗೆ ಹಿರಿಯ ಜೀವಿಗಳ ಬದುಕುಗಳಿಗೆ ಬೆಲೆ ಇಲ್ಲವೇ? ಕಸದ ರಾಶಿಗಳಲ್ಲಿ ರಸ್ತೆ ವಿಭಕದ ಮೇಲೆ ರಸ್ತೆಯ ಇಕ್ಕೆಲಗಳಲ್ಲಿ ಜೀವಿಸುತ್ತಿದ್ದಾರೆ. ಇವರಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು.ಇಲಾಹಿ ಭಕ್ಷ್, ನಿವೃತ್ತ ಮುಖ್ಯಶಿಕ್ಷಕ
ಹೊಟ್ಟೆಗೆ ಅನ್ನ, ನೀರು ಇಲ್ಲದೇ ಈ ಅನಾಥರು ಪರದಾಡುತ್ತಿದ್ದಾರೆ. ಯಾರಾದರೂ ತಿಂಡಿತಿನಿಸುಗಳು ಕೊಟ್ಟರೆ ಸೇವಿಸುತ್ತಾರೆ. ಇಲ್ಲವಾದರೆ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಬಿಸಿಲಿಗೆ, ಗಾಳಿ, ಮಳೆಗೆ, ಚಳಿಗೆ ಈ ಹಿರಿಯ ಜೀವಿಗಳ ಬದುಕು ಅತ್ಯಂತ ಶೋಚನೀಯವಾಗಿದೆ. ಭಿಕ್ಷಾಟನೆಯನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.
ಪಟ್ಟಣದ ಡಿವಿಜಿ ಮುಖ್ಯರಸ್ತೆ, ಎಚ್.ಎನ್.ವೃತ್ತ, ಜಚನಿ (ಗೂಳೂರು) ರಸ್ತೆ, ಎಚ್.ಎನ್.ವೃತ್ತದಲ್ಲಿನ ತಂಗುದಾಣ, ಟಿ.ಬಿ.ಕ್ರಾಸ್ ಗಳ ರಸ್ತೆಗಳ ಪಕ್ಕದಲ್ಲಿ ನಿರ್ಗತಿಕರು, ಅನಾಥರು ಹೆಚ್ಚಾಗಿದ್ದಾರೆ. ಆದರೆ ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಯವರು ಇವರಿಗೆ ಪುರ್ನವಸತಿ ಕಲ್ಪಿಸಿಲ್ಲ. ಆಸರೆ ನೀಡಿಲ್ಲ. ಆರೋಗ್ಯ, ಊಟ, ವಸತಿ ಕಲ್ಪಿಸಿಲ್ಲ.
‘ಮುಖ್ಯರಸ್ತೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಯವರು ಸಂಚರಿಸುತ್ತಾರೆ. ಸಂಚರಿಸುವ ಮಾರ್ಗದಲ್ಲಿಯೇ ವಿಶ್ರಾಂತಿ ಪಡೆದ ಅನಾಥರ ಬಗ್ಗೆ ಕನಿಷ್ಠ ಕಾಳಜಿ ವಹಿಸಿಲ್ಲ. ಅನಾಥರಿಗೆ ಪುರ್ನವಸತಿ ಕಲ್ಪಿಸಬೇಕಾದ ಅಧಿಕಾರಿಗಳು ಮೌನ ವಹಿಸಿದ್ದಾರೆ. ಅನಾಥರಿಗೆ ಪುರ್ನವಸತಿ ಕಲ್ಪಿಸುವ ಹೆಸರಿನಲ್ಲಿ ಲಕ್ಷಾಂತರ ಹಣ ಲೂಟಿ ಮಾಡಿದ್ದಾರೆ’ ಎಂದು ಹಿರಿಯ ವಕೀಲ ಎ.ಜಿ.ಸುಧಾಕರ್ ದೂರುವರು.
ವಸತಿ ಊಟದ ವ್ಯವಸ್ಥೆಗೆ ಸೂಚನೆ
ಅನಾಥರು ನಿರ್ಗತಿಕರಿಗೆ ವಸತಿ ಊಟ ಚಿಕಿತ್ಸೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಕೂಡಲೇ ಅನಾಥರನ್ನು ಪತ್ತೆ ಮಾಡಬೇಕು- ಪ್ರಶಾಂತ್ ಕೆ. ಪಾಟೀಲ್ ತಹಶೀಲ್ದಾರ್ ಬಾಗೇಪಲ್ಲಿ
ಅಧಿಕಾರಿಗಳ ನೇಮಕ
ಪಟ್ಟಣದ ಅನಾಥರಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳ ತಂಡ ನೇಮಿಸಲಾಗುವುದು. ಇವರನ್ನು ಗುರ್ತಿಸಿ ಪುನರ್ವಸತಿ ಕಲ್ಪಿಸುತ್ತೇವೆ- ಸಿ.ಎನ್.ಶೇಷಾದ್ರಿ ಸಮಾಜ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.