ಬಾಗೇಪಲ್ಲಿ: ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನ ಬಣದ) ಮುಖಂಡರು ಛತ್ರಿಗಳನ್ನು ಹಿಡಿದು ಪಟ್ಟಣದ ಮುಖರಸ್ತೆಯಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ಮಾಡಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಬಿಟಿಸಿ ಸೀನಾ ಮಾತನಾಡಿ, ‘ಆಂಧ್ರಪ್ರದೇಶದ ಕೂಗಳತೆಯ ಭಾಗದಲ್ಲಿ ತಾಲ್ಲೂಕು ಇದೆ. ಬಾಗೇಪಲ್ಲಿ ಆಂಧ್ರಪ್ರದೇಶನಾ ಎಂದು ಅನೇಕರು ಪ್ರಶ್ನೆ ಮಾಡುವಂತೆ ಆಗಿದೆ. ಬಿಜಾಪುರವನ್ನು ವಿಜಯಪುರ, ಗುಲ್ಭರ್ಗವನ್ನು ಕಲಬುರ್ಗಿ, ಬೆಳಗಾಂನ್ನು ಬೆಳಗಾವಿ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ಮಾದರಿಯಲ್ಲಿ ಬಾಗೇಪಲ್ಲಿಯನ್ನು ಭಾಗ್ಯನಗರ ಹಾಗೂ ತಾಲ್ಲೂಕಿನ ಪಲ್ಲಿಗಳನ್ನು ಹಳ್ಳಿಗಳನ್ನಾಗಿ ಮರುನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕು ಕಚೇರಿ ಮುಂದೆ ತಹಶೀಲ್ದಾರ್ ಎಂ.ನಾಗರಾಜ್ ಬಂದು ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಕರವೇ ಸ್ವಾಭಿಮಾನ ಬಣದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಬೀವುಲ್ಲಾ, ನಿವೃತ್ತ ಶಿಕ್ಷಕ ಅಮೀರ್ ಜಾನ್, ಮುಖಂಡರಾದ ನಂದೀಶ, ಸುರೇಶ್ ಬಾಬು, ರವಿಯಾದವ್, ಅಮರನಾಥ, ರವಿ ಯಾದವ್, ಬಾಬಾ ಫಕ್ರುದ್ದೀನ್, ನೂರುಲ್ಲಾ, ಜಾವಿದ್, ರಾಮಚಂದ್ರ ಹಾಜರಿದ್ದರು.