ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಬೇಕಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮತ್ತು ಸುರಕ್ಷಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಎಸ್ಜೆಸಿಐಟಿ ವಿದ್ಯಾಲಯದ ಪ್ರಾಂಶುಪಾಲ ಜಿ.ಟಿ. ರಾಜು ತಿಳಿಸಿದರು.
ಪರೀಕ್ಷೆ ಬರೆಯಲು ಬರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೀಡುವಂತೆ ಡಿಡಿಪಿಐ ಕೆ.ಎಂ. ಜಯರಾಮರೆಡ್ಡಿ ಅವರಿಗೆ ಶುಕ್ರವಾರ ಉಚಿತವಾಗಿ ಮಾಸ್ಕ್ಗಳನ್ನು ನೀಡಿ ಮಾತನಾಡಿದರು. ಎಸ್ಜೆಸಿಐಟಿ, ಬಿಜಿಎಸ್ ರೋಟರಿ, ರೋಟರಿ ಮಿಡ್ಟೈನ್ ಮತ್ತು ರೋಟರಿ ಶಂಕರ ಪಾರ್ಕ್ ಸಂಸ್ಥೆಗಳು ಈ ಮಾಸ್ಕ್ಗಳನ್ನು ಕೊಡುಗೆಯಾಗಿ ನೀಡಿದವು.
ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಮಕ್ಕಳು ಉತ್ತಮವಾಗಿ ಪರೀಕ್ಷೆ ಬರೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಕೋವಿಡ್ನ ಈ ಸಂಕಷ್ಟದ ಕಾಲದಲ್ಲಿ ಎಲ್ಲರೂ ಸರ್ಕಾರದ ಮಾರ್ಗಸೂಚಿ ಪಾಲಿಸಿ ತಮ್ಮ ಹಾಗೂ ಸಮಾಜರ ಆರೋಗ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.
ಎಸ್ಜೆಐಟಿ ಕುಲಸಚಿವ ಜೆ. ಸುರೇಶ್, ರೋಟರಿ ಅಧ್ಯಕ್ಷ ಜಿ. ನಾರಾಯಣ, ಕಾರ್ಯದರ್ಶಿ ಸುನಿಲ್, ರೋಟರಿ ಸಂಸ್ಥೆಯ ಶೋಭಾ, ಸತೀಶ್ ಚಂದ್ರರೆಡ್ಡಿ, ನಾಗೇಂದ್ರಬಾಬು ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಹಾಗೂ ರೋಟರಿ ಸಂಸ್ಥೆ ಪದಾಧಿಕಾರಿಗಳು ಹಾಜರಿದ್ದರು.