ಕಾಂಗ್ರೆಸ್ ಮುಖಂಡರ ಸಭೆ

ಬಾಗೇಪಲ್ಲಿ: ‘ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ಅವರು ದರ್ಪ ತೋರಿದ್ದಾರೆ. ಅವರನ್ನು ಅಮಾನತು ಪಡಿಸುವಂತೆ ಆಗ್ರಹಿಸಿ, ಕಾಂಗ್ರೆಸ್ ಹಿರಿಯ ನಾಯಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಮುಖಂಡರು, ಕಾರ್ಯಕರ್ತರು ಮುಂದಾಗಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರೆ ನೀಡಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸ್ವಗೃಹದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಗುಡಿಬಂಡೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರನ್ನು ಅಪಹರಣ ಮಾಡಲು ಬಿಜೆಪಿಯವರು ಕುತಂತ್ರ ಮಾಡಿದ್ದಾರೆ. ಬಿಜೆಪಿಗೆ ಬರುವಂತೆ ನನಗೂ ಆಹ್ವಾನಿಸಿದ್ದರು. ಸಚಿವ ಸ್ಥಾನ, ಹಣ, ಆಸೆ, ಆಮಿಷ ತೋರಿಸಿದ್ದಾರೆ. ಆದರೆ ನಾನು ಕ್ಷೇತ್ರದ ಮತದಾರರು ನೀಡಿರುವ ಪಾವಿತ್ರ್ಯತೆ ಕಾಪಾಡಲು ನಾನು ಬಿಜೆಪಿಗೆ ಹೋಗಲಿಲ್ಲ. ಬಿಜೆಪಿಯವರ ಸ್ನೇಹವೇ ಬೇಡ ಎಂದು ಕಾಂಗ್ರೆಸ್ನಲ್ಲಿ ಇದ್ದೇನೆ ಎಂದರು.
ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಬಹುಮತ ಇದೆ. ಬಿಜೆಪಿ ಸದಸ್ಯರೇ ಇಲ್ಲದ ಆಡಳಿತದಲ್ಲಿ ಕಾಂಗ್ರೆಸ್ ನವರಿಗೆ ಆಸೆ, ಆಮಿಷ ನೀಡಿ ವಾಮಮಾರ್ಗದಲ್ಲಿ ಬಿಜೆಪಿಯವರು ಆಡಳಿತ ನಡೆಸಿರುವುದು ಖಂಡನೀಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ ಮಾತನಾಡಿ, ಬಿಜೆಪಿಯವರು ರಾಜ್ಯ ಸರ್ಕಾರ ಮಾಡಲು ವಾಮಮಾರ್ಗದಲ್ಲಿ ಆಡಳಿತ ಹಿಡಿದರು. ಇದಂತೆ ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರನ್ನು ಅಪಹರಣ ಮಾಡಿ, ವಾಮಮಾರ್ಗದಲ್ಲಿ ಆಡಳಿತ ಹಿಡಿದಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನರಸಿಂಹಪ್ಪ, ಮುಖಂಡ ಮಂಜುನಾಥರೆಡ್ಡಿ, ಬಿ.ವಿ.ವೆಂಕಟರವಣ, ನರಸಿಂಹರೆಡ್ಡಿ, ಆದಿರೆಡ್ಡಿ, ಕೃಷ್ಣೇಗೌಡ, ಪುರಸಭೆ ಅಧ್ಯಕ್ಷೆ ರೇಷ್ಮಾಬಾನು, ಉಪಾಧ್ಯಕ್ಷ ಎ.ಶ್ರೀನಿವಾಸ್, ಸೋಮಶೇಖರ್, ಪಿ.ಆರ್.ಚಲಂ, ಪ್ರಭಾಕರರೆಡ್ಡಿ, ಅಮರನಾಥರೆಡ್ಡಿ, ಬಿ.ವಿ.ಜಯಪ್ರಕಾಶ್ ನಾರಾಯಣ್, ಎಚ್.ವಿ.ನಾಗರಾಜ್, ಶ್ರೀನಿವಾಸರೆಡ್ಡಿ, ಶಿವರಾಮರೆಡ್ಡಿ, ಆದಿರೆಡ್ಡಿ, ಪಿ.ಆರ್.ಚಲಂ, ಕಡ್ಡೀಲುವೆಂಕಟರವಣ, ಯರ್ರಕಿಟ್ಟಪ್ಪ, ರಘುನಾಥರೆಡ್ಡಿ, ಕೆ.ಆರ್.ನರೇಂದ್ರಬಾಬು, ಬಿ.ವಿ.ಮಂಜುನಾಥ್, ಟಿ.ವಿ.ಸುಮಂಗಳಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.