ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನಿಂದ ಗುರುವಾರ ಮೃತಪಟ್ಟ ಚಿಂತಾಮಣಿ ತಾಲ್ಲೂಕು ಮಲ್ಲಿಕಾರ್ಜುನಪುರದ ಗರ್ಭಿಣಿ ಅನುಪಮಾ ಅವರ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ!
ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಎಎಸ್ಐ ಮುರಳೀಧರ್, ಮೃತಳ ಅಣ್ಣ ಬೈರೇಗೌಡ, ಸಂಬಂಧಿ ದೇವರಾಜು, ತಂದೆ ಗಣೇಶಪ್ಪ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ.
ನಗರದ ಹಳೇ ಜಿಲ್ಲಾಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಬಳಿ ಕರ್ತವ್ಯದಲ್ಲಿದ್ದ ವೇಳೆ ಐದಾರು ಜನರು ಅಕ್ರಮ ಗುಂಪು ಕಟ್ಟಿಕೊಂಡು ಆಸ್ಪತ್ರೆಯ ಆವರಣದ ಒಳಗಡೆ ಏಕಾಏಕಿ ಕಿರುಚಿಕೊಂಡು ಬರುತ್ತಿದ್ದರು. ಆಗ ಕರ್ತವ್ಯದಲ್ಲಿದ್ದ ನಾನು ಮತ್ತು ಸಿಬ್ಬಂದಿ ತಡೆದು ಇದು ಕೋವಿಡ್ ಆಸ್ಪತ್ರೆ. ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ತಿಳಿಸುತ್ತಿದ್ದರೂ ನಮ್ಮ ಮಾತು ಲೆಕ್ಕಿಸಲಿಲ್ಲ.
ನಮ್ಮ ಹುಡುಗಿ ಅನುಪಮಾ ಸಾವಿಗೀಡಾಗಿದ್ದಾರೆ ಎಂದು ಆಸ್ಪತ್ರೆ ಆವರಣಕ್ಕೆ ಏಕಾಏಕಿ ಪ್ರವೇಶಿಸಿದರು. ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಮಾಸ್ಕ್ ಸಹ ಧರಿಸಿರಲಿಲ್ಲ. ಅಂತರ ಕಾಯ್ದುಕೊಂಡಿರಲಿಲ್ಲ. ಆಸ್ಪತ್ರೆಯ ವೈದ್ಯರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಅವರಿಗೆ ಜೋರಾಗಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಆದ್ದರಿಂದ ಇವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.