ಚಿಕ್ಕಬಳ್ಳಾಪುರ: ಕೋವಿಡ್–19ಗೆ ತುತ್ತಾಗಿ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿ ಸೋಮವಾರ ಕರ್ತವ್ಯಕ್ಕೆ ವಾಪಾಸಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ವೈರ್ಲೆಸ್ ವಿಭಾಗದ ಹೆಡ್ ಕಾನ್ಸ್ಟೆಬಲ್ ಚಂದ್ರಶೇಖರ್ ಅವರಿಗೆ ಎಸ್ಪಿ ಕಚೇರಿಯಲ್ಲಿ ವಿಶೇಷ ಸ್ವಾಗತ ನೀಡಲಾಯಿತು.
ಸೋಮವಾರ ಕರ್ತವ್ಯಕ್ಕೆ ಮರಳಿದ ಚಂದ್ರಶೇಖರ್ ಅವರನ್ನು ಕೇದ್ರ ವಲಯ ಐಜಿಪಿ ಕೆ.ವಿ.ಶರತ್ಚಂದ್ರ ಮತ್ತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಶಾಲು ಹೊದೆಸಿ, ಫಲಪುಷ್ಪ ನೀಡಿ ಸ್ವಾಗತಿಸುವ ಮೂಲಕ ಆರೋಗ್ಯದ ಬಗ್ಗೆ ವಿಚಾರಿಸಿ, ಆತ್ಮಸ್ಥೈರ್ಯ ತುಂಬಿದರು.
ಚಂದ್ರಶೇಖರ್ ಅವರು ಎಸ್ಪಿ ಕಚೇರಿ ಪ್ರವೇಶದ ವೇಳೆ ಪ್ರವೇಶದ್ವಾರದಲ್ಲಿ ಮಹಿಳಾ ಸಿಬ್ಬಂದಿ ಅವರ ಮೇಲೆ ಹೂವುಗಳನ್ನು ಎರಚಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಮೇ ತಿಂಗಳಲ್ಲಿ ರಜೆಯ ಮೇಲೆ ಕೆಲ ದಿನ ತುಮಕೂರಿಗೆ ಹೋಗಿ ವಾಪಾಸಾಗಿದ್ದ ಚಂದ್ರಶೇಖರ್ ಅವರಿಗೆ ಕೋವಿಡ್ ತಗುಲಿರುವುದು ಮೇ 29 ರಂದು ಪತ್ತೆಯಾಗಿತ್ತು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾನ್ಸ್ಟೆಬಲ್ ಒಬ್ಬರಿಗೆ ಕೋವಿಡ್ ತಗುಲಿದ್ದು ಕೇಳಿ ಪೊಲೀಸ್ ಇಲಾಖೆ ಬೆಚ್ಚಿತ್ತು.
ಸೋಂಕಿತ ಕಾನ್ಸ್ಟೆಬಲ್ ಪ್ರಾಥಮಿಕ ಸಂಪರ್ಕಕ್ಕೆ ಬಂದ ಸಹದ್ಯೋಗಿಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಜತೆಗೆ, ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿರುವ ಪೊಲೀಸ್ ವಸತಿ ಸಂಕಿರ್ಣಗಳ ಪೈಕಿ ಎರಡು ಸಂಕೀರ್ಣಗಳನ್ನು ಸೀಲ್ಡೌನ್ ಮಾಡಲಾಗಿತ್ತು.