ಚಿಕ್ಕಮಗಳೂರು: ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಜಿಲ್ಲೆಯಲ್ಲಿ 14 ವರ್ಷದೊಳಗಿನ 141 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ!
2023-24ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ನಡೆಸಿದ ಸಮೀಕ್ಷೆಯಿಂದ ಇದು ಗೊತ್ತಾಗಿದೆ. ಶಾಲೆಯಿಂದ ಹೊರಗಳಿದ 190 ಮಕ್ಕಳನ್ನು ಗುರುತಿಸಿದ್ದ ಶಿಕ್ಷಣ ಇಲಾಖೆ, 49 ಮಕ್ಕಳನ್ನು ಶಾಲೆಗೆ ವಾಪಸ್ ಕರೆ ತರುವಲ್ಲಿ ಸಫಲವಾಗಿದೆ. ಉಳಿದ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ.
ಪ್ರೌಢಶಾಲೆ ಹಂತದಲ್ಲೇ(8ರಿಂದ 10ನೇ ತರಗತಿ) ಹೆಚ್ಚು ಮಕ್ಕಳು ಶಾಲೆ ಬಿಡುತ್ತಿದ್ದಾರೆ ಎಂಬುದು ಶಿಕ್ಷಣ ಇಲಾಖೆಯ ಸಮೀಕ್ಷೆಯಿಂದ ಗೊತ್ತಾಗಿದೆ. ಮಕ್ಕಳು ಶಾಲೆಗೆ ಬಾರದಿರಲು ಪ್ರಮುಖ ಕಾರಣ ಎಂದರೆ ಅವರು ಕಲಿಕೆಯಲ್ಲಿ ಹಿಂದುಳಿದಿರುವುದು. ಹಿಂದುಳಿದ ನಂತರ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡು ಶಾಲೆಗೆ ಬರುವುದನ್ನೇ ನಿಲ್ಲಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಎರಡನೇಯದಾಗಿ ದುಡಿಯಲು ಮಕ್ಕಳು ಸೇರಿಕೊಳ್ಳುತ್ತಿರುವುದು. ತಂದೆ–ತಾಯಿ ತಮ್ಮ ಜತೆಯಲ್ಲಿ ಕೂಲಿ ಕೆಲಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದು, ಇದು ಕೂಡ ಮಕ್ಕಳು ಶಾಲೆ ಕಡೆಗೆ ಬರದಿರಲು ಕಾರಣ ಎಂದು ಅವರು ವಿವರಿಸುತ್ತಾರೆ.
ಮೂರನೇ ಕಾರಣ ಎಂದರೆ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ದೂರಾಗುತ್ತಿದ್ದಾರೆ. ಕೂಲಿ ಅರಸಿ ಮಹಾನಗರಗಳತ್ತ ವಲಸೆ ಹೋದ ಪೋಷಕರ ಜತೆಗೆ ಹೋಗುವ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಬೇರೆ–ಬೇರೆ ಜಿಲ್ಲೆಗಳಿಂದ ಕೂಲಿ ಅರಸಿ ಮಲೆನಾಡಿಗೆ ಬರುವ ಪೋಷಕರ ಮಕ್ಕಳೂ ಶಾಲೆಯಿಂದ ದೂರಾಗುತ್ತಿದ್ದಾರೆ ಎಂದು ಹೇಳುತ್ತಾರೆ.
ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರಕಬೇಕು. ಆದ್ದರಿಂದ ವಲಸೆ ಕಾರ್ಮಿಕರ ಮಕ್ಕಳನ್ನೂ ಹುಡಿಕಿ ಪೋಷಕರ ಮನವೊಲಿಸಿ ಶಾಲೆಗೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ವಿವರಿಸುತ್ತಾರೆ.