ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸ್ಪೈಸಸ್ ಪಾರ್ಕ್, ಕಾಫಿ ಟೆಕ್ನಾಲಜಿ ಪಾರ್ಕ್ ಸ್ಥಾಪನೆಗೆ ಕೈಗಾರಿಕಾ ಇಲಾಖೆಯಿಂದ ಪೂರಕ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಗುರುವಾರ ನಡೆದ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕುರಿತ ಅಧಿಕಾರಿ ಗಳು ಹಾಗೂ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದರು. ಸ್ಪೈಸಸ್ ಪಾರ್ಕ್, ಕಾಫಿ ಟೆಕ್ನಾಲಜಿ ಪಾರ್ಕ್ ಸ್ಥಾಪನೆಗೆ ಜಾಗ ಒದಗಿಸಲು ಗಮನ ಹರಿಸಲಾಗುವುದು. ಕೈಗಾರಿಕೆಗಳ ಸ್ಥಾಪನೆಗೆ ಜಾಗ ಒದಗಿಸಿ, ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುವುದು ಎಂದರು.
ಕೈಗಾರಿಕೆ ನೀತಿ ಮತ್ತು ಭೂಸುಧಾ ರಣೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ತೊಂದರೆಗಳನ್ನು ಪರಿಹರಿಸಲಾಗಿದೆ. ಕೃಷಿಯೇತರರು ಜಮೀನು ಖರೀದಿ ಸಲು ಅವಕಾಶ ಮಾಡಲಾಗಿದೆ. ಕೈಗಾರಿಕೆ ಗಳ ಬೆಳವಣಿಗೆ, ಸುಧಾರಣೆಗೆ ಒತ್ತು ನೀಡಲಾಗಿದೆ. ಕರ್ನಾಟಕ ಇಂಡಸ್ಟ್ರಿ ಯಲ್ ಮಿಸಿಲೇಷನ್ ಕಾಯ್ದೆಯಲ್ಲಿ ಕೆಲ ತಿದ್ದುಪಡಿ ಮಾಡಲಾಗಿದೆ. ಕೈಗಾರಿಕೆ ಸ್ಥಾಪಿಸಿದ ಮೂರು ವರ್ಷಗಳ ನಂತರ ಕೆಲ ಅನುಮತಿ ಪಡೆದುಕೊಳ್ಳಲು ಅವಕಾಶ ಮಾಡಲಾಗಿದೆ ಎಂದು ವಿವರಿಸಿದರು.
ಕೆಲವು ಕಡೆ ಬ್ಯಾಂಕ್ಗಳವರು ಸಾಲ (ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಜ್ ಲೋನ್) ಕೊಡುತ್ತಿಲ್ಲ ಎಂಬ ದೂರುಗಳಿವೆ. ಬ್ಯಾಂಕ್ನವರ ಸಭೆ ಏರ್ಪಡಿಸಿ ಸಾಲ ನೀಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ 1000 ಎಕರೆಗೆ ವಿಸ್ತರಿಸಬೇಕು. ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆ ಘಟಕ, ಹಲಸು, ತರಕಾರಿ ಘಟಕ, ಕೋಲ್ಡ್ ಸ್ಟೊರೇಜ್ ಇಂಥವನ್ನು ಸ್ಥಾಪಿಸಲು ಗಮನಹರಿಸಿದರೆ ಅನುಕೂಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಕೆಐಎಡಿಬಿ ಸಿಇಒ ಶಿವಶಂಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು ಇದ್ದರು.