ರಂಭಾಪುರಿ ಪೀಠ (ಬಾಳೆಹೊನ್ನೂರು): ರಂಭಾಪುರಿ ಪೀಠದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 51 ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ಕೆತ್ತನೆಗಾಗಿ ಆಂಧ್ರ ಪ್ರದೇಶದ ಮಡಕಶಿರಾದಿಂದ ಬಂದ 100 ಟನ್ ತೂಕವುಳ್ಳ ಪ್ರಥಮ ಬೃಹತ್ ಶಿಲೆಗೆ ಪೀಠದ ವೀರಸೋಮೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿ ಲಾರಿಯಿಂದ ಕೆಳಗೆ ಇಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಪ್ರತಿ 15 ದಿನಗಳ ಅಂತರದಲ್ಲಿ ಇನ್ನೂ ಮೂರು ಬೃಹತ್ ಶಿಲೆಗಳು ಪೀಠಕ್ಕೆ ಬರಲಿದ್ದು, ತದನಂತರ ಶಿಲ್ಪಿ ಅಶೋಕ ಗುಡಿಗಾರ ಮತ್ತು ಅವರ ತಂಡದವರು ಮೂರ್ತಿ ಕೆತ್ತನೆ ಕಾರ್ಯ ಆರಂಭ ಮಾಡಲಿದ್ದಾರೆ. ಇನ್ನೊಂದೆಡೆ 30x25 ಅಳತೆಯಲ್ಲಿ ಭದ್ರ ಬುನಾದಿಯನ್ನು ಕಟ್ಟಡ ಗುತ್ತಿಗೆದಾರ ಹುಬ್ಬಳ್ಳಿಯ ವೀರೇಶ ಪಾಟೀಲ ಭರ್ತಿ ಮಾಡಲಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಮೂರ್ತಿ ಕೆತ್ತನೆಯ ಕಾರ್ಯ ಪೂರ್ಣಗೊಳಿಸಲು ಯೋಜಿಸಿದ್ದು, ಇದಕ್ಕಾಗಿ ಚಿರಂತನ ಬಿಲ್ಡರ್ಸ್ ಮಾಲೀಕ ಶ್ರೀನಿವಾಸ ರೆಡ್ಡಿ ತಂಡದವರು ಶ್ರಮ ವಹಿಸಿ ಕಾರ್ಯ ಮಾಡಲಿದ್ದಾರೆ. ಪೀಠದಲ್ಲಿ ಪ್ರತಿಷ್ಠಾಪಿಸಲಾಗುವ ಈ ಮೂರ್ತಿಯಿಂದಾಗಿ ಮುಂದೊಂದು ದಿನ ಸುಪ್ರಸಿದ್ಧವಾದ ಯಾತ್ರಾ ಸ್ಥಳವಾಗಲಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ವೀರೇಶ ಪಾಟೀಲ, ಅರ್ಚಕ ರೇಣುಕಸ್ವಾಮಿ, ಶಿವಪ್ರಕಾಶ ಶಾಸ್ತ್ರಿಗಳು, ಚಂದ್ರಶೇಖರ, ಸುರಗೀಮಠ, ಶಿವಾನಂದ, ಶಿಕ್ಷಕ ಕಟ್ಟೇಗೌಡ್ರ ಮತ್ತು ಕಾರ್ಮಿಕರು ಇದ್ದರು.