ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕವಾದ ಅಂತರ ಬೆಳೆ ವಿಧಾನ

ಕಲ್ಲವ್ವನಾಗತಿ ಹಳ್ಳಿಯ ರೈತ ಜಯರಾಜಪ್ಪ ಸಾಧನೆ
Last Updated 30 ನವೆಂಬರ್ 2022, 6:11 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಹೂವು ಹಾಗೂ ತರಕಾರಿ ಬೆಳೆದು ಕೈತುಂಬ ಆದಾಯ ಗಳಿಸುತ್ತಿರುವ ಸಮೀಪದ ಕಲ್ಲವ್ವನಾಗತಿ ಹಳ್ಳಿಯ ರೈತ ಕೆ.ಎಂ. ಜಯರಾಜಪ್ಪ ಇತರ ರೈತರಿಗೆ ಮಾದರಿಯಾಗಿದ್ದಾರೆ.

ತಮ್ಮ ಒಂದು ಎಕರೆ ಜಮೀನಿನಲ್ಲಿ 6 ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದು, ಉತ್ತಮ ನೀರು ದೊರೆತಿದೆ. ಒಂದು ಎಕರೆಯಲ್ಲಿ 650 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದು, ಆರಂಭದ ವರ್ಷಗಳಲ್ಲಿ ಟೊಮೊಟೊ, ಮೆಣಸಿನಕಾಯಿ, ಬದನೆಕಾಯಿ ಮತ್ತಿತರ ತರಕಾರಿ ಬೆಳೆಯುತ್ತಿದ್ದರು. ಈ ವರ್ಷ ಮಿರಾಬುಲ್‌ ಗುಲಾಬಿ, ಚೆಂಡು ಹೂವು ಹಾಗೂ ಟೊಮೆಟೊವನ್ನು ಅಂತರ ಬೆಳೆಯಾಗಿ ಬೆಳೆದಿದ್ದಾರೆ.

‘ವರ್ಷದ ಹಿಂದೆ ತಮಿಳುನಾಡಿನಿಂದ 650 ಮಿರಾಬುಲ್‌ ಗುಲಾಬಿ ಸಸಿ ತಂದು ನಾಟಿ ಮಾಡಿದ್ದೆವು. ಸಸಿಗಳ ವೆಚ್ಚ, ಬೇಸಾಯ, ನಾಟಿ, ಮೇಲುಗೊಬ್ಬರ, ಕಳೆ, ಔಷಧಕ್ಕಾಗಿ ಈವರೆಗೆ ₹ 1.75 ಲಕ್ಷ ಖರ್ಚು ಮಾಡಿದ್ದೇವೆ. ವರ್ಷದಿಂದ ಹೂವು ಕೊಯ್ಲಿಗೆ ಬಂದಿದ್ದು, ಎರಡು ದಿನಗಳಿಗೊಮ್ಮೆ ಕಟಾವು ಮಾಡುತ್ತಿದ್ದೇವೆ. ಆರಂಭದ ದಿನಗಳಲ್ಲಿ ಎರಡು ದಿನಗಳಿಗೊಮ್ಮೆ 5ರಿಂದ 8 ಕೆ.ಜಿ.ಯಷ್ಟು ಹೂವನ್ನು ಕೊಯ್ಲು ಮಾಡುತ್ತಿದ್ದೆವು. ಈಗ 20ರಿಂದ 25 ಕೆ.ಜಿ.ಯಷ್ಟು ಹೂ ಸಿಗುತ್ತಿದೆ. ಹೂವನ್ನು ದಾವಣಗೆರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 80ರಿಂದ ₹ 150ರವೆಗೆ ಮಾರಾಟ ಮಾಡುತ್ತಿದ್ದೇವೆ. ಈವರೆಗೆ ₹ 2 ಲಕ್ಷ ಆದಾಯ ಬಂದಿದ್ದು, ಮುಂದಿನ ತಿಂಗಳು ಇಳುವರಿ ಹೆಚ್ಚಾಗಲಿದೆ. ತಿಂಗಳಿಗೆ ಕನಿಷ್ಠ ₹ 18,000ದಿಂದ ₹ 20,000 ಆದಾಯದ ನಿರೀಕ್ಷೆ ಇದೆ’ ಎಂದು ರೈತ ಜಯರಾಜಪ್ಪ ಮಾಹಿತಿ ನೀಡಿದರು.

ಎಲ್ಲೋ ಗೋಲ್ಡ್‌ ಚೆಂಡು ಹೂ: ಅಡಿಕೆ ಹಾಗೂ ಮಿರಾಬುಲ್‌ ಗುಲಾಬಿಗಳ ನಡುವೆ ಅಂತರ ಬೆಳೆಯಾಗಿ 2,000 ಎಲ್ಲೋ ಗೋಲ್ಡ್‌ ಚೆಂಡು ಹೂವು ಸಸಿ ನಾಟಿ ಮಾಡಲಾಗಿತ್ತು. ಇದುವರೆಗೆ ಸಸಿಗಳು, ಕಳೆ, ಮೇಲುಗೊಬ್ಬರ, ಔಷಧ ಸೇರಿ ₹ 8,000 ಖರ್ಚು ಮಾಡಲಾಗಿದೆ. ಈಗ ಅದೂ ಕೊಯ್ಲಿಗೆ ಸಿದ್ಧವಾಗಿದೆ. ಈಗ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 30ರಿಂದ ₹ 40 ದರ ಇದ್ದು, ₹ 15,000 ಆದಾಯ ಬಂದಿದೆ. 15 ದಿನಗಳ ನಂತರ ಚೆಂಡು ಹೂವನ್ನು ತೆಗೆದು, ತರಕಾರಿಯನ್ನು ಬೆಳೆಯುವ ಯೋಜನೆ ಇದೆ’ ಎಂದು ಅವರು ವಿವರಿಸಿದರು.

ಟೊಮೊಟೊ: ಒಂದು ಎಕರೆಯಲ್ಲಿ ಪ್ರದೇಶದಲ್ಲಿ 3,000 ಟೊಮೆಟೊ ಸಸಿಗಳನ್ನು ನಾಟಿ ಮಾಡಲಾಗಿದೆ. ₹ 12,000 ವೆಚ್ಚವಾಗಿದೆ. ಹದಿನೈದು ದಿನಗಳಿಂದ ಕೊಯಿಲು ಮಾಡುತ್ತಿದ್ದೇವೆ. ಈವರೆಗೆ 4 ಕ್ವಿಂಟಲ್‌ ಮಾರಾಟ ಮಾಡಿದ್ದೇವೆ. ಸ್ಥಳೀಯವಾಗಿ ನಡೆಯುವ ಸಂತೆಗಳಿಗೆ ತೆಗೆದುಕೊಂಡು ಹೋಗಿ 20 ಕೆ.ಜಿ. ತೂಕದ ಬಾಕ್ಸ್‌ ಒಂದಕ್ಕೆ ₹ 200ರಂತೆ ಮಾರಾಟ ಮಾಡುತ್ತಿದ್ದೇವೆ. ಇನ್ನೂ ಒಂದೂವರೆ ತಿಂಗಳು ಇಳುವರಿ ಬರುತ್ತದೆ. ₹ 40,000 ಆದಾಯದ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ಕೋಟ್‌...

ಅಂತರ ಬೆಳೆ ವಿಧಾನ ಅನುಸರಿಸುತ್ತಿರುವ ಕಾರಣ ಬಿಡುವಿಲ್ಲದ ಕೆಲಸ ಇದೆ. ಪತ್ನಿ ಗೀತಾ ಕೃಷಿಗೆ ಕೈಜೋಡಿಸಿರುವುದರಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ.
ಜಯರಾಜಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT