ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಅವಧಿಗೆ ಖರೀದಿ ಭರಾಟೆ

ಮಾರುಕಟ್ಟೆಯಲ್ಲಿ ಹೆಚ್ಚಿದ ಜನದಟ್ಟಣೆ, ಅಗತ್ಯ ವಸ್ತುಗಳ ಸಂಗ್ರಹಿಸಿಕೊಂಡ ಜನರು
Last Updated 27 ಏಪ್ರಿಲ್ 2021, 13:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ಹೆಚ್ಚುತ್ತಿರುವುದನ್ನು ತಡೆಯುವ ಉದ್ದೇಶದಿಂದ ಏ.27ರಿಂದ ಮೇ 12ರವರೆಗೆ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. 14 ದಿನಗಳ ಈ ಅವಧಿಯನ್ನು ಮನೆಯಲ್ಲೇ ಕಳೆಯಲು ಜನರು ಅಗತ್ಯ ವಸ್ತುಗಳ ಖರೀದಿಗೆ ಮಂಗಳವಾರ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಇದರಿಂದ ಖರೀದಿ ಭರಟೆ ಜೋರಾಗಿ ನಡೆಯಿತು.

ವಾರಾಂತ್ಯದ ಕರ್ಫ್ಯೂ ಕಳೆದು ನಿರಾಳರಾಗುವ ಹೊತ್ತಿಗೆ ಸರ್ಕಾರ 14 ದಿನಗಳ ಲಾಕ್‌ಡೌನ್‌ ಹೇರಿದೆ. ಒಲ್ಲದ ಮನಸ್ಸಿನಿಂದಲೇ ಪರಿಸ್ಥಿತಿಯನ್ನು ಸ್ವೀಕರಿಸಿದಂತೆ ಕಾಣುತ್ತಿರುವ ಜನರು ಗೊಣಗುತ್ತಲೇ ಮಾರುಕಟ್ಟೆಗೆ ಬಂದರು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ತವಕ ರೈತರಲ್ಲಿತ್ತು. ಅಗತ್ಯ ವಸ್ತುಗಳನ್ನು ಖರೀದಿಸುವ ಧಾವಂತ ನಗರ ನಿವಾಸಿಗಳಲ್ಲಿತ್ತು. ಗುಳೆ ಹೊದವರು ಊರಿಗೆ ಮರಳಿದರು. ಹೊರ ಊರುಗಳಿಗೆ ಪ್ರಯಾಣ ಬೆಳೆಸುವವರಿಂದ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು.

ದರ ಏರಿಕೆ ಆತಂಕ:ಲಾಕ್‌ಡೌನ್‌ ಅವಧಿಯಲ್ಲಿ ನಿತ್ಯ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಅಗತ್ಯ ವಸ್ತು, ತರಕಾರಿ ಮತ್ತು ಹಣ್ಣು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೂ, ಜನರು ಮಂಗಳವಾರ ಮಾರುಕಟ್ಟೆಗೆ ಧಾವಿಸಿದ್ದರ ಹಿಂದೆ ದರ ಏರಿಕೆಯ ಆತಂಕ ಮನೆ ಮಾಡಿತ್ತು. ಈ ಬಗ್ಗೆ ಅನೇಕರು ಅಸಮಾಧಾನವನ್ನೂ ಹೊರಹಾಕಿದರು.

ಮಂಗಳವಾರ ಬೆಳಿಗ್ಗೆಯಿಂದಲೇ ದಿನಸಿ ಅಂಗಡಿಯ ಎದುರು ಜನದಟ್ಟಣೆ ಕಂಡುಬಂದಿತು. ಖರೀದಿಗೆ ಮುಗಿಬಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ದಿನಸಿ ಸಾಮಗ್ರಿಯ ದೊಡ್ಡ ಪಟ್ಟಿ ಹಿಡಿದು ಬಂದಿದ್ದ ಗ್ರಾಹಕರು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ, ಅಂಗಡಿಗಳ ಎದುರಿನ ಸರತಿ ಸಾಲು ರಸ್ತೆಗಳ ವರೆಗೆ ಚಾಚಿಕೊಂಡಿತ್ತು. ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಅಂತರ ಕಾಯ್ದುಕೊಳ್ಳಲಾಯಿತು.

ಬಟ್ಟೆ ಅಂಗಡಿ ಬಳಿ ಜನ:ಲಾಕ್‌ಡೌನ್‌ ಮಾಹಿತಿ ತಿಳಿದ ಅನೇಕರು ಮಂಗಳವಾರ ಬೆಳಿಗ್ಗೆ ಬಟ್ಟೆ ಖರೀದಿಗೆ ಮಾರುಕಟ್ಟೆಗೆ ಬಂದಿದ್ದರು. ಲಕ್ಷ್ಮಿ ಬಜಾರಿನ ಹಲವು ಅಂಗಡಿಗಳಲ್ಲಿ ವಹಿವಾಟು ಕೂಡ ನಡೆಯಿತು. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಲಕ್ಷ್ಮಿಬಜಾರು, ಸಂತೆಹೊಂಡದ ರಸ್ತೆ ಸೇರಿ ಹಲವೆಡೆ ಜನದಟ್ಟಣೆ ಹೆಚ್ಚಾಗಿತ್ತು. ಮಾಹಿತಿ ಅರಿತ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.

ಬಟ್ಟೆ ಅಂಗಡಿಯಲ್ಲಿ ನಡೆಯುತ್ತಿದ್ದ ವಹಿವಾಟಿಗೆ ಕಡಿವಾಣ ಹಾಕಿದರು. ರಸ್ತೆಯಲ್ಲಿ ಕಾಯುತ್ತಿದ್ದ ಜನರಿಗೆ ಸೂಚನೆ ನೀಡಿ ಮನೆಗೆ ಕಳುಹಿಸಿದರು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳ ಬಾಗಿಲು ಮುಚ್ಚಿಸಿದರು.

ಲಾಕ್‌ಡೌನ್‌ ಅವಧಿಯಲ್ಲಿ ಬ್ಯಾಂಕ್‌, ವಿಮೆ ಕಚೇರಿಗಳು ಕೂಡ ಬಾಗಿಲು ಮುಚ್ಚಲಿವೆ. ಬ್ಯಾಂಕ್ ವಹಿವಾಟು ಬಾಕಿ ಉಳಿಸಿಕೊಂಡವರು, ವಿಮೆ ಕಚೇರಿಯಲ್ಲಿ ಕೆಲಸ ಇರುವವರು ಮನೆಯಿಂದ ಹೊರ ಬಂದಿದ್ದರು. ವಿದ್ಯುತ್‌ ಬಿಲ್‌ ಪಾವತಿ, ಕಂದಾಯ ಪಾವತಿಗೂ ಜನರು ಸಾಲುಗಟ್ಟಿ ನಿಂತಿದ್ದರು.

ಬೀಜ, ಗೊಬ್ಬರ ಖರೀದಿ:ಮುಂಗಾರು ಪೂರ್ವ ಹಂಗಾಮಿನ ಸಿದ್ಧತೆಯಲ್ಲಿರುವ ರೈತರು ಬೀಜ, ಗೊಬ್ಬರ ಸೇರಿ ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ಬಂದಿದ್ದರು. ಕೃಷಿಗೆ ಪೂರಕವಾಗಿರುವ ಉತ್ಪನ್ನಗಳ ಅಂಗಡಿಗಳ ಬಾಗಿಲು ತೆರೆಯಲು ಹಾಗೂ ವಹಿವಾಟು ನಡೆಸಲು ಲಾಕ್‌ಡೌನ್‌ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಸಂಚಾರಕ್ಕೆ ಪೊಲೀಸರು ಅಡ್ಡಿಪಡಿಸುವ ಆತಂಕದಿಂದ ರೈತರು ಮಾರುಕಟ್ಟೆಗೆ ಧಾವಿಸಿದ್ದರು.

ಈರುಳ್ಳಿ, ಎಳ್ಳು ಸೇರಿ ಹಲವು ಬೆಳೆಗಳನ್ನು ಮೇ ತಿಂಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆಗೆ ಬೇಕಾಗಿರುವ ಬೀಜವನ್ನು ಖರೀದಿಸುವ ತವಕ ರೈತರಲ್ಲಿತ್ತು. ಕೊಳವೆ ಬಾವಿ ಮೋಟಾರು, ಪಂಪು, ಪೈಪು ಅಂಗಡಿಗಳ ಎದುರು ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಂಡುಬಂದರು. ಎಲೆಕ್ಟ್ರಿಕ್‌ ಉಪಕರಣಗಳ ರಿಪೇರಿ ಮಳಿಗೆಯಲ್ಲಿ ಇಡೀ ದಿನ ಕೆಲಸ ನಡೆಯಿತು.

ರೈತರಲ್ಲಿ ಹೆಚ್ಚಿದ ತಳಮಳ:ತರಕಾರಿ, ಹಣ್ಣು ಬೆಳೆದಿರುವ ರೈತರಲ್ಲಿ ತಳಮಳ ಹೆಚ್ಚಾಗಿದೆ. ನ್ಯಾಯಯುತ ಬೆಲೆ ಸಿಗುವುದಿಲ್ಲವೆಂದು ಭಾವಿಸಿ ಹಲವರು ಮಂಗಳವಾರವೇ ತರಕಾರಿಯನ್ನು ಮಾರುಕಟ್ಟೆಗೆ ತಂದಿದ್ದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಬೆಲೆ ಕುಸಿತ ಉಂಟಾಗುತ್ತದೆ ಎಂಬುದು ರೈತರ ಲೆಕ್ಕಾಚಾರ. ಕಳೆದ ವರ್ಷ ತರಕಾರಿ, ಹಣ್ಣು ಮಾರಾಟಕ್ಕೆ ಆಗಿರುವ ಕಷ್ಟವನ್ನು ಮತ್ತೆ ಅನುಭವಿಸಬೇಕಾಗಬಹುದು ಎಂಬ ದುಗುಡ ಅವರಲ್ಲಿ ಕಾಣುತ್ತಿತ್ತು. ಅನೇಕರು ಬಾಳೆಹಣ್ಣನ್ನು ಕೆ.ಜಿ.ಗೆ ₹ 20ರಂತೆ ಮಾರಾಟ ಮಾಡಿದರು.

ಏಪ್ರಿಲ್‌ ಅಂತ್ಯ ಹಾಗೂ ಮೇ ತಿಂಗಳಲ್ಲಿ ಹಲವು ಶುಭ ಕಾರ್ಯಗಳು ನಿಗದಿಯಾಗಿದ್ದವು. ಮದುವೆ, ಗೃಹ ಪ್ರವೇಶ, ಹಬ್ಬ, ಉತ್ಸವಗಳನ್ನು ಮನಗಂಡು ರೈತರು ತರಕಾರಿ, ಹೂ ಹಾಗೂ ಹಣ್ಣು ಬೆಳೆದಿದ್ದರು. ಕಳೆದ ವರ್ಷವೂ ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ ಹೇರಿಕೆಯಾಗಿ ಸಂಕಷ್ಟ ಅನುಭವಿಸಿದ್ದರು.

ಊರಿಗೆ ಮರಳಿದ ಜನರು:ಉದ್ಯೋಗದ ಕಾರಣಕ್ಕೆ ಬೆಂಗಳೂರು, ಮುಂಬೈ, ಚಿಕ್ಕಮಗಳೂರು, ಹಾಸನ ಸೇರಿ ಹಲವೆಡೆಯಲ್ಲಿದ್ದ ಜನರು ಮಂಗಳವಾರ ಊರಿಗೆ ಮರಳಿದರು. ಇದರಿಂದ ಬಸ್‌ಗಳಲ್ಲಿ ಪ್ರಯಾಣಿಕರ ಪ್ರಮಾಣ ಹೆಚ್ಚಾಗಿತ್ತು. ಬಸ್‌ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು.

ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬರುವ ಎಲ್ಲ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ದಾವಣಗೆರೆ, ಹುಬ್ಬಳ್ಳಿ, ಬಳ್ಳಾರಿ, ಶಿವಮೊಗ್ಗ ಭಾಗಕ್ಕೆ ಸಂಚರಿಸುವ ಬಸ್‌ಗಳಲ್ಲಿಯೂ ಹೆಚ್ಚು ಜನರಿದ್ದರು. ಅನೇಕರು ದ್ವಿಚಕ್ರ ವಾಹನಗಳಲ್ಲೇ ಬೆಂಗಳೂರಿನಿಂದ ಮರಳುತ್ತಿದ್ದ ದೃಶ್ಯ ಕಂಡುಬಂದಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ಗುಟ್ಕಾ ಬೆಲೆ ಹೆಚ್ಚಳ:ಮಾರುಕಟ್ಟೆಯಲ್ಲಿ ಗುಟ್ಕಾ ಬೆಲೆಯಲ್ಲಿ ಬಾರಿ ಹೆಚ್ಚಳ ಕಂಡುಬಂದಿತು. ಸಗಟು ಮಾರಾಟಗಾರರ ಬಳಿ ಖರೀದಿಸಲು ಮುಂದಾಗಿದ್ದ ಚಿಕ್ಕ ವ್ಯಾಪಾರಸ್ಥರು ಅಸಮಾಧಾನ ಹೊರಹಾಕಿದರು.

₹ 8ರಿಂದ 10ಕ್ಕೆ ಲಭ್ಯವಾಗುತ್ತಿದ್ದ ಸ್ಯಾಚೆಟ್‌ ಬೆಲೆ ₹ 25ಕ್ಕೆ ಏರಿಕೆಯಾಗಿದೆ. ಗುಟ್ಕಾವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇವುಗಳ ಬೆಲೆಯನ್ನು ಕೇಳಿದ ಅನೇಕರು ಖರೀದಿಸಲು ಮುಂದಾಗಲಿಲ್ಲ. ಲಾಕ್‌ಡೌನ್‌ ಅವಧಿಯ ಲಾಭ ಪಡೆಯಲು ಹವಣಿಸುತ್ತಿರುವ ಡೀಲರ್‌ಗಳು ವಾರದಿಂದ ಅಂಗಡಿಗಳಿಗೆ ಗುಟ್ಕಾ ಸರಬರಾಜು ಮಾಡಿರಲಿಲ್ಲ ಎಂದು ವ್ಯಾಪಾರಸ್ಥರು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT