ಚಳ್ಳಕೆರೆ: ತಾಲ್ಲೂಕಿನಲ್ಲಿ ಈ ಬಾರಿ ಸಕಾಲಕ್ಕೆ ಮಳೆ ಸುರಿದಿದ್ದು, ರೈತರು ಭೂಮಿಯನ್ನು ಬಿತ್ತನೆಗೆ ಸಿದ್ಧಗೊಳಿಸಿದ್ದಾರೆ. ಮುಂಗಾರು ವೇಳೆ ಬಿತ್ತನೆಬೀಜದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಆಯಾ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಉತ್ತಮ ತಳಿಯ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು. ದಾಸ್ತಾನಿನಲ್ಲಿರುವ ಬಿತ್ತನೆಬೀಜ ಪರಿಶೀಲಿಸಿ ವಿತರಿಸಬೇಕು’ ಎಂದು ಹೇಳಿದರು.
‘ಕೆಲವೆಡೆ ಕೆಟ್ಟಿರುವ ಶುದ್ಧ ಕುಡಿಯುವ ನೀರು ಘಟಕವನ್ನು ಕೂಡಲೇ ದುರಸ್ತಿ ಮಾಡಿಸಿ ಪೂರೈಸಬೇಕು’ ಎಂದು ಇಒ ಅಧಿಕಾರಿ ಗಳಿಗೆ ತಾಕೀತು ಅವರು ಹೇಳಿದರು.
‘ಜಲಜೀವನ್ ಮಿಷನ್ ಕಾಮಗಾರಿ ಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು. ಹೂಳಲು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಾಲುವೆ ತೋಡುವುದನ್ನು ತಡೆದು ಸೂಕ್ತ ಜಾಗದಲ್ಲಿ ಪೈಪ್ಲೈನ್ ಅಳವಡಿಸಬೇಕು. ವಿವಾದ ಬಗೆಹರಿಸಿ, ಸ್ಮಶಾನ ಜಾಗ ಮಂಜೂರು ಮಾಡಬೇಕು’ ಎಂದು ತಹಶೀಲ್ದಾರ್ಗೆ ಸೂಚಿಸಿದರು.
‘ಕಂದಾಯ ಇಲಾಖೆ ವ್ಯಾಪ್ತಿಯ ರೂಢಿದಾರಿ, ಜಮೀನಿನ ದಾರಿ, ಪೋಡಿ, ಪೌತಿ ಹಾಗೂ ಸರ್ಕಾರಿ ಭೂಮಿ ಒತ್ತುವರಿ ತೆರವಿನ ಕಾರ್ಯವನ್ನು ಚುರುಕುಗೊಳಿಸಲಾಗಿದೆ’ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಗ್ರಾಮೀಣಾಭಿವೃದ್ಧಿ ಯೋಜನೆ ಕಾಮಗಾರಿ ಚುರುಕುಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ನವೀನ್ ಸೂಚಿಸಿದರು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಇಲಾಖೆ ವತಿಯಿಂದ ಅಭಿನಂದಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಹೇಳಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ನಾಮನಿರ್ದೇಶಿತ ಸದಸ್ಯರಾದ ಎಚ್.ವಿ. ಪ್ರಕಾಶ್ಬಾಬು, ದೊರೆ ನಾಗರಾಜ, ಫಕ್ರುದ್ದೀನ್, ಚಂದ್ರಶೇಖರ್, ಸುನಂದಮ್ಮ, ತಾಲ್ಲೂಕು ಪಂಚಾ ಯಿತಿ ಆಡಳಿತಾಧಿಕಾರಿ ರಮೇಶ್ಕುಮಾರ್,ಇ.ಒ ಹನುಮಂತಪ್ಪ ಎಚ್. ಇದ್ದರು.